ಹಾಸನ: ‘ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವುದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯಾ ರಾಜ್ಯದ ಭಾಷೆಯಲ್ಲೇ ನಡೆಸುವುದು ಹಾಗೂ ಶಾಸ್ತ್ರೀಯ ಭಾಷೆ ಸ್ಥಾನ ಮಾನ ನೀಡಿದ ಬಳಿಕ ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವುದು, ಈ ಮೂರು ವಿಚಾರಗಳ ಬಗ್ಗೆ ಕನ್ನಡಿಗರು ಒಟ್ಟಾಗಿ ಕೇಂದ್ರದ ಮುಂದೆ ಹಕ್ಕೊತ್ತಾಯ ಮಂಡಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ನುಡಿದರು.
ಜಿಲ್ಲಾ ಸಾಹಿತ್ಯ ಪರಿಷತ್ ಭವನದ ಮುಂಭಾಗದಲ್ಲಿ ಏರ್ಪಡಿಸಿರುವ ಹಾಸನ ಜಿಲ್ಲಾಮಟ್ಟದ 12ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
‘ಕರ್ನಾಟಕದಲ್ಲೇ ಕನ್ನಡ ಉಳಿಸಲು ಹೋರಾಟ ನಡೆಸಬೇಕಾದಂಥ ಸ್ಥಿತಿ ಬಂದಿರುವುದು ದುರಂತದ ವಿಚಾರ. ಕನ್ನಡವನ್ನು ಅನಿವಾರ್ಯಗೊಳಿಸದಿರುವುದೇ ಇದಕ್ಕೆ ಕಾರಣ. ಗಡಿ ಪ್ರದೇಶದ 19 ಜಿಲ್ಲೆಗಳಲ್ಲಿ ಕನ್ನಡ ಕಲಿಯದಿದ್ದರೂ ಬದುಕಬಹುದು ಎಂಬ ವಾತಾವರಣವಿದೆ. ಈ ಜಿಲ್ಲೆಗಳಲ್ಲಿ ಹೆಚ್ಚು ಹೆಚ್ಚು ಕನ್ನಡದ ಚಟುವಟಿಕೆ ನಡೆಸಬೇಕು. ಕನ್ನಡ ಬೆಳೆಸಬೇಕು’ ಎಂದರು.
ಸಮ್ಮೇಳನಾಧ್ಯಕ್ಷ ಎಚ್.ಬಿ. ರಮೇಶ್, ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಕಾದ್, ಶಾಸಕ ಎಚ್.ಎಸ್. ಪ್ರಕಾಶ್ ಮತ್ತಿತರರು ವೇದಿಕೆಯಲ್ಲಿದ್ದರು.