ಬೆಂಗಳೂರಿನಲ್ಲಿ ನಡೆಯುವ 77ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮೂರು ದಿನಗಳ ಕಾಲ ನಗರದ ಎಲ್ಲ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವಂತೆ ಗೃಹಸಚಿವ ಆರ್.ಅಶೋಕ್ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನೀಡಿರುವ ಸೂಚನೆ ಸಮಯೋಚಿತವಾಗಿದೆ.
ಚಿತ್ರ ಮಂದಿರದ ಮಾಲೀಕರು ಕನ್ನಡ ಚಿತ್ರದ ಹೆಸರಿನಲ್ಲಿ ಕಳಪೆ ಚಿತ್ರಗಳನ್ನು ಕಾಟಾಚಾರಕ್ಕೆ ಎಂಬಂತೆ ಪ್ರದರ್ಶಿಸದೆ ಕನ್ನಡ ನಾಡು ನುಡಿಗೆ ಪೂರಕವಾದ ಸದಬಿರುಚಿಯ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ಸಂಸ್ಕೃತಿಯ ಕಂಪನ್ನು ಪಸರಿಸುವ ಕಾರ್ಯ ನಡೆಸಲಿ. ಹೆಸರಾಂತ ಚಿತ್ರಗಳಾದ ರಣಧೀರ ಕಂಠೀರವ, ಮಯೂರ, ಇಮ್ಮಡಿ ಪುಲಿಕೇಶಿ, ಬಂಗಾರದ ಮನುಷ್ಯ, ಭೂತಯ್ಯನಮಗ ಅಯ್ಯು, ಗಂಧದಗುಡಿ, ಕಿತ್ತೂರು ಚೆನ್ನಮ್ಮ, ಶ್ರೀಕೃಷ್ಣದೇವರಾಯ, ನಾಗರಹಾವು, ಶುಭಮಂಗಳ, ಕಸ್ತೂರಿ ನಿವಾಸ ಬಿಡುಗಡೆ, ಬೆಳ್ಳಿಮೋಡ, ಗೆಜ್ಜೆಪೂಜೆ, ಶರಪಂಜರ ಮುಂತಾದ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ಚಿತ್ರಗಳ ಗತವೈಭವವನ್ನು ಇಂದಿನ ಯುವಜನತೆಗೂ ತಲುಪಿಸುವ ಕಾರ್ಯ ನಡೆಸಲಿ.