ಹುಬ್ಬಳ್ಳಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ ಅಪೂರ್ಣವಾಗಿದ್ದು (ಚಿತ್ರ ನೋಡಿ) ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ತಕ್ಷಣ ಲೋಪ ಸರಿಪಡಿಸದಿದ್ದರೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಪಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗಣಿತ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ ಇಂಗ್ಲಿಷ್ ಮಾಧ್ಯಮದಲ್ಲಿ ಪೂರ್ಣವಾಗಿದ್ದು, ಆ ಮಾಧ್ಯಮದ ವಿದ್ಯಾರ್ಥಿಗಳು ಪ್ರಶ್ನೆಯನ್ನು ಸುಲಭವಾಗಿ ಬಿಡಿಸಬಹುದು. ಆದರೆ ಕನ್ನಡದಲ್ಲಿ ಪ್ರಶ್ನೆ ಅಪೂರ್ಣವಾಗಿರುವುದರಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿ ಗಳಿಗೆ ಅನ್ಯಾಯವಾಗಿದೆ.
ಈ ಪ್ರಶ್ನೆಯಲ್ಲಿ 2ಎಬಿಸಿ ಎಂದು ಸಾಧಿಸಿರಿ.....ಎಂಬುದರ ಬದಲಿಗೆ ಕೇವಲ 2ಎಬಿಸಿ ಎಂದಷ್ಟೇ ಇದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ ಎಂಬುದು ಪಾಲಕರ ವಾದ.
ಈ ಪ್ರಶ್ನೆಗೆ 3 ಅಂಕಗಳನ್ನು ನಿಗದಿ ಪಡಿಸಲಾಗಿದ್ದು, ಅಷ್ಟು ಗ್ರೇಸ್ ಅಂಕಗಳನ್ನು ಕೊಡಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ.ಈಗಾಗಲೇ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಆರಂಭವಾಗಿದೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.