ಶಿಕ್ಷಣ ಸಚಿವರೇ, ರಾಜ್ಯದ ಗಡಿ ಭಾಗದ ಕನ್ನಡ ಶಾಲೆಗಳನ್ನು ಮುಚ್ಚಿ ಬಿಡಿ ಎಂದು ಹೇಳಲು ಮುಜುಗರವಾಗುತ್ತದೆ. ಆದರೆ ಬೇರೆ ದಾರಿ ಇಲ್ಲ. ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಗಡಿ ಭಾಗದ ಶಾಲೆಗಳನ್ನು ಮುಚ್ಚಿ ಅವನ್ನು ಪಕ್ಕದ ದೊಡ್ಡ ಶಾಲೆಗಳಿಗೆ ವಿಲೀನ ಮಾಡುವುದು ಒಳಿತು. ಇದರಿಂದ ಗಡಿ ಭಾಗದಲ್ಲಿ ಕನ್ನಡ ಕುಂಠಿತವಾಗುತ್ತದೆ ಎಂದು ಭಾವಿಸಬೇಕಿಲ್ಲ.
ಕನ್ನಡಕ್ಕೆ ಬೆದರಿಕೆ ಇರುವುದು ಇಂಗ್ಲಿಷ್ನಿಂದ. ಕಾರವಾರದ ಗಡಿ ಊರುಗಳಲ್ಲಿ ಮೊದಲು ಮರಾಠಿ ಶಾಲೆಗಳಿದ್ದವು. ಕನ್ನಡ ಭಾಷೆಯ ಮಹತ್ವ ಅರಿತು ಸ್ಥಳೀಯರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಿದರು.
ಮರಾಠಿ ಶಿಕ್ಷಕರೂ ಕನ್ನಡ ಕಲಿತು ಶಾಲೆಗಳನ್ನು ಮುನ್ನಡೆಸಿದರು. ಆದರೆ ಇಂಗ್ಲಿಷ್ ಜ್ಞಾನ ಇಲ್ಲದಿದ್ದರೆ ಮಕ್ಕಳಿಗೆ ಭವಿಷ್ಯವಿಲ್ಲ ಎಂಬ ಅರಿವು ಪಾಲಕರಲ್ಲಿ ಮೂಡಿದ್ದೇ ತಡ ಕಾನ್ವೆಂಟ್ ಶಾಲೆಗಳು ತಲೆ ಎತ್ತಿದವು. ಆ ನಂತರ ಮರಾಠಿ ಶಾಲೆಗಳೂ ಕಡಿಮೆಯಾದವು.
ಗಡಿ ಭಾಗದ ಮತ್ತು ಅರಣ್ಯ ಪ್ರದೇಶದ ಶಾಲೆಗಳ ಶಿಕ್ಷಕರು ಈಗ ಏನುಮಾಡುತ್ತಿದ್ದಾರೆಂಬುದು ನಿಮಗೆ ಗೊತ್ತೇ? ಪದವೀಧರನೊಬ್ಬನ್ನು 1500-2000 ರೂ ಸಂಬಳಕ್ಕೆ ಗೊತ್ತು ಮಾಡಿ ಕಲಿಸುವ ಜವಾಬ್ದಾರಿಯನ್ನು ಅವನಿಗೆ ವಹಿಸಿ ಶಿಕ್ಷಕರು ಕಾಂಟ್ರಾಕ್ಟ್, ಕಲ್ಲು ಗಣಿಗಾರಿಕೆ, ರೇತಿ ಬೋಟ್, ತೋಟ ಮತ್ತು ಟ್ರಕ್ಕು ಓಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಡಿ ಭಾಗದ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುವುದು ಹೇಗೆ ಸಾಧ್ಯ?