ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಂಶೋಧನಾ ಕೃತಿಗಳ ಬಿಡುಗಡೆ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ತುಮಕೂರು: ಕನ್ನಡ ಭಾಷಾಭಿವೃದ್ಧಿ ಯೋಜನೆಯಡಿ ವಿಶ್ವವಿದ್ಯಾಲಯ ಪ್ರಕಟಿಸಿರುವ 40 ಪುಸ್ತಕಗಳನ್ನು ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಸೋಮವಾರ ಬಿಡುಗಡೆ ಮಾಡಿದರು.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ದೊರೆತ ನಂತರ ಕನ್ನಡ ಸಂಶೋಧನೆಗೆಂದು ರಾಜ್ಯದ 11 ವಿಶ್ವವಿದ್ಯಾಲಯಗಳಿಗೆ ರಾಜ್ಯ ಸರ್ಕಾರ ತಲಾ ರೂ. 1 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಅನುದಾನದ ಸದ್ಬಳಕೆ ಸಂತಸ ತಂದಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯಗಳಲ್ಲಿ ಭೌತಿಕ ಪ್ರಗತಿಯ ಜತೆಗೆ ಬೌದ್ಧಿಕ ಪ್ರಗತಿಯೂ ಆಗಬೇಕು. ಬದ್ಧತೆ ಹೆಚ್ಚಿದರೆ ಮಾತ್ರ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಶಿಕ್ಷಣಕ್ಕಾಗಿ ಇತರ ರಾಜ್ಯಗಳಿಗಿಂತ ಹೆಚ್ಚು ಮೊತ್ತವನ್ನು ಕರ್ನಾಟಕ ಸರ್ಕಾರ ಮೀಸಲಿಡುತ್ತಿದೆ. ರಾಜ್ಯದಲ್ಲಿ ಒಟ್ಟು 1.38 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಗಾಗಿ ಸರ್ಕಾರ ರೂ. 12584 ಕೋಟಿ ಹಣ ಖರ್ಚು ಮಾಡಿದೆ ಎಂದು ಮಾಹಿತಿ ನೀಡಿದರು.

ಒಬ್ಬ ವ್ಯಕ್ತಿ ಹಾಗೂ ಒಂದು ದೇಶದ ಭವಿಷ್ಯ ಶಿಕ್ಷಣದಿಂದ ಬದಲಾಗುತ್ತದೆ. ಉತ್ಕೃಷ್ಟ ಶಿಕ್ಷಣ ದೊರೆತವರಿಗೆ ಮಾತ್ರ ಉತ್ತಮ ಅವಕಾಶಗಳು ಲಭ್ಯವಾಗುತ್ತವೆ ಎಂದು ಕಿವಿ ಮಾತು ಹೇಳಿದರು.

ಪ್ರಕಟಿತ ಪುಸ್ತಕಗಳ ಕುರಿತು ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಶರ್ಮಾ, ಪ್ರಕಟಿತ 40 ಪುಸ್ತಕಗಳ ಪೈಕಿ ಒಟ್ಟು 11 ಪುಸ್ತಕಗಳು ಜಿಲ್ಲೆಯ ಕಲೆ, ಸಂಸ್ಕೃತಿ, ಜನಜೀವನವನ್ನು ದಾಖಲಿಸಿವೆ. ಸಂಶೋಧನೆ, ಅಧ್ಯಾಪನೆಯನ್ನು ವಿಶ್ವವಿದ್ಯಾಲಯ ಸಮಾನ ಗೌರವದಿಂದ ಕಾಣುತ್ತಿದೆ ಎಂದರು.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಧಾನ ವ್ಯವಸ್ಥಾಪಕ ದಿಲೀಪ್ ಮಾವಿನಕುರ್ವೆ, ಕುಲ ಸಚಿವ ಪ್ರೊ.ಡಿ.ಶಿವಲಿಂಗಯ್ಯ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT