ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಮಾಜ ನಿರ್ಮಾಣ ಮಾಡಿ

Last Updated 17 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

 ಬೆಂಗಳೂರು: `ಇಂದು ಜಾತಿ ಸಮಾಜವನ್ನು ನಿರ್ಮಿಸುವವರಿದ್ದಾರೆಯೇ ಹೊರತು, ಕನ್ನಡ ಸಮಾಜ ನಿರ್ಮಾಣಕ್ಕೆ ಯಾರೊಬ್ಬರು ಗಮನ ನೀಡದಿರುವುದು ದುರದೃಷ್ಟಕರ~ ಎಂದು ಸಮಾಜವಾದಿ ಚಿಂತಕ ಕೋಣಂದೂರು ವೆಂಕಪ್ಪಗೌಡ ವಿಷಾದಿಸಿದರು.

ಕನ್ನಡ ಜನಶಕ್ತಿ ಸಂಸ್ಥೆ ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ನಮ್ಮಡನಿರುವ ಕನ್ನಡ ಕುಲದೀಪಕರೊಂದಿಗೆ ಸಲ್ಲಾಪ- ಸಂವಾದ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ರಾಜಕಾರಣಿಗಳು ತಮ್ಮ ಜಾತಿಯವರನ್ನು ಸಂಘಟಿಸುತ್ತಾ ಜಾತಿ ಮುಖಂಡರಾಗಿ ರೂಪುಗೊಳ್ಳುತ್ತಿದ್ದಾರೆ. ಆದರೆ ಸರ್ವರನ್ನು ಸಮಾನವಾಗಿ ಕಾಣುವ, ಎಲ್ಲರಿಗೂ ಸಮಾನ ಸೌಲಭ್ಯ ದೊರೆಯುವಂತಹ ಸಮಾಜ ನಿರ್ಮಾಣ ಮಾಡುವಂತಹ ಆದರ್ಶ ಪ್ರಭಾವಿ ನಾಯಕರು ಕಾಣುತ್ತಿಲ್ಲ~ ಎಂದು ವಿಷಾದಿಸಿದರು.

`ಇಂಗ್ಲಿಷ್ ಭಾಷೆಯ ವ್ಯಾಪಕ ಬಳಕೆಯನ್ನು ನೋಡಿದಾಗ ಇಂದಿಗೂ ಬ್ರಿಟಿಷರ ಗುಲಾಮರಾಗಿದ್ದೇವೆ ಎಂಬ ಭಾವನೆ ಮೂಡುತ್ತದೆ. ಭಾಷೆ ಎಂಬುದು ಒಂದು ಜನಾಂಗದ ವೀರತ್ವದ ಪ್ರತೀಕ. ಸಾಧನೆಯ ಸಂಕೇತ. ಇನ್ನಾದರೂ ಎಲ್ಲರೂ ಕನ್ನಡ ಭಾಷೆಯನ್ನೇ ಬಳಸುವಂತಾಗಬೇಕು~ ಎಂದರು.

`ಶಾಂತವೇರಿ ಗೋಪಾಲಗೌಡರು ಆದರ್ಶ ವ್ಯಕ್ತಿ. ಅಂತಹ ಮಹಾನ್ ವ್ಯಕ್ತಿಗಳನ್ನು ಇಂದು ನಿರೀಕ್ಷಿಸುವಂತಿಲ್ಲ. ಹಾಗಾಗಿ ಗೋಪಾಲಗೌಡರ ಪ್ರತಿಮೆ ನಿರ್ಮಾಣವಾಗಬೇಕು ಎಂಬುದು ನನ್ನ ಬಹುಕಾಲದ ಬಯಕೆ~ ಎಂದು ಭಾವುಕರಾಗಿ ನುಡಿದರು.

`ದೇಶ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಜನತೆಯೇ ಕಾರಣ. ಅಯೋಗ್ಯರು, ಅಸಮರ್ಥರನ್ನು ವಿಜೃಂಭಿಸುವ ಕಾರ್ಯ ನಡೆದೇ ಇದೆ. ಜನರಲ್ಲಿ ನಿರ್ಲಕ್ಷ್ಯ ಮನೋಭಾವದಿಂದಾಗಿ ಭಾವೈಕ್ಯತೆಯ ವಾತಾವರಣ ಸೃಷ್ಟಿಯಾಗಲು ಸಾಧ್ಯವಾಗಿಲ್ಲ~ ಎಂದರು. ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ. ರಾಮೇಗೌಡ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT