ಅಬುದಾಬಿ:ಕುವೆಂಪು ಕಲಾನಿಕೇತನ ಸಂಸ್ಥೆ ಮತ್ತು ಅಬುದಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಇಲ್ಲಿ ಕುವೆಂಪು ವಿಚಾರಗಳನ್ನು ವಿಶ್ವಕ್ಕೆ ಸಾರುವ ಉದ್ದೇಶದಿಂದ ವಿಶ್ವ ಮಾನವ ಕುವೆಂಪು ಕಲಾ ಉತ್ಸವ ಮತ್ತು ಎರಡನೇ ವಿಶ್ವ ಕನ್ನಡ ಸಮ್ಮೇಳನವನ್ನು ಅದ್ದೂರಿಯಿಂದ ನಡೆಸಲಾಯಿತು.
ಉದ್ಯಮಿ ಡಾ. ಬಿ.ಆರ್.ಶೆಟ್ಟಿ, ದುಬೈಯ ಉದ್ಯಮಿ ಜಫರುಲ್ಲಾ ಖಾನ್(ಮಂಡ್ಯ), ಹಿರಿಯ ಸಾಹಿತಿ ಡಾ.ದೇ. ಜವರೇಗೌಡ ಮತ್ತು ದೇಶ, ವಿದೇಶದ ಗಣ್ಯರ ಸಮ್ಮಖದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಖ್ಯಾತ ಗಾಯಕಿ ರತ್ನಮಾಲಾ ಪ್ರಕಾಶ್ ಮತ್ತು ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ತಂಡದಿಂದ ಕುವೆಂಪು ನಾಡಗೀತೆ, ಲಕ್ಷ್ಮಿ ಅವರಿಂದ `ಹಚ್ಚೇವು ಕನ್ನಡದ ದೀಪ ನೃತ್ಯ~, ಮಂಗಳಾ ಶೆಟ್ಟಿ ಪವನ್ ತಂಡದವರಿಂದ ಕರ್ನಾಟಕ ಜಾತ್ರೆ ನೃತ್ಯ - ಈ ಮುಂತಾದ ಕಾರ್ಯಕ್ರಮಗಳು ನಡೆದವು.
ಸಾಹಿತಿಗಳಾದ ಡಾ. ದೇಜಗೌ, ಮಳಲಿ ವಸಂತ ಕುಮಾರ್, ಡಾ. ಲತಾ ರಾಜಶೇಖರ್, ಮಾಯಿ ಗೌಡ, ಬಿ.ಎಚ್. ಸುರೇಶ್ ಅವರು ಸಾಹಿತ್ಯಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಯಮಿ ಡಾ.ಬಿ.ಆರ್. ಶೆಟ್ಟಿ ದಂಪತಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.