ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮವೆಂದೇ ಖ್ಯಾತಿಯಾಗಿದ್ದ `ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಪ್ರಥಮ ಸರಣಿಯ ಅದ್ಭುತ ಯಶಸ್ಸಿನಿಂದ ಉತ್ತೇಜನಗೊಂಡಿರುವ ಸುವರ್ಣ ವಾಹಿನಿ ಈಗ ದ್ವೀತಿಯ ಸರಣಿಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಕಾರ್ಯಕ್ರಮದ ಮೊದಲ ಸರಣಿಯನ್ನು ನಿರೂಪಿಸಿದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರೇ ದ್ವೀತಿಯ ಸರಣಿಯನ್ನೂ ನಿರೂಪಿಸಲಿದ್ದಾರೆ. ಕಾರ್ಯಕ್ರಮದ ಮೊದಲ ಸರಣಿಯಲ್ಲಿದ್ದ ನಿಯಮಗಳ ರೀತಿಯಲ್ಲೇ ಈ ಸರಣಿ ಕೂಡ ನಡೆಯಲಿದೆ.
ದ್ವಿತೀಯ ಸರಣಿಯಲ್ಲಿ ಭಾಗವಹಿಸಲು ಇಚ್ಛಿಸುವವರಿಗಾಗಿ ಇಂದಿನಿಂದ (ಡಿ.15) ನೋಂದಣಿ ಆರಂಭಗೊಂಡಿದೆ. ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಕಾರ್ಯಕ್ರಮದ ನಿರೂಪಕ ಪುನೀತ್ ರಾಜ್ಕುಮಾರ್ ಅವರು ಕೇಳುವ ಪ್ರಶ್ನೆಗೆ ಸೂಕ್ತ ಉತ್ತರ ನೀಡಿ ವೀಕ್ಷಕರು ಪ್ರವೇಶ ನೋಂದಣಿ ಮಾಡಿಕೊಳ್ಳಬಹುದು.
`ಕರ್ನಾಟಕದ ಬೃಹತ್ ರಿಯಾಲಿಟಿ ಶೋ ಅನ್ನು ಮತ್ತೆ ಪ್ರಾರಂಭಿಸುತ್ತಿರುವುದಕ್ಕೆ ಖುಷಿಯಾಗಿದೆ. ಪ್ರಥಮ ಸರಣಿಯಲ್ಲಿ ನಮಗೆ ನಾಡಿನ ಎಲ್ಲೆಡೆಯಿಂದ ಅತ್ಯದ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ದ್ವಿತೀಯ ಸರಣಿಯನ್ನು ಮತ್ತಷ್ಟು ಉತ್ತಮಪಡಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೇವೆ. ಪುನೀತ್ ಮತ್ತು ಬಿಗ್ ಸಿನರ್ಜಿ ಪ್ರೊಡಕ್ಷನ್ಸ್ ಜತೆ ಕೆಲಸ ಮಾಡುವುದು ನಮಗೆ ಒಂದು ಒಳ್ಳೆ ಅನುಭವ' ಎಂದು ತಮ್ಮ ಸಂತಸ ಹಂಚಿಕೊಳ್ಳುತ್ತಾರೆ ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಅನೂಪ್ ಚಂದ್ರಶೇಖರನ್.