ಕೆಂಗೇರಿ: `ಕನ್ನಡದ ನಿಜವಾದ ಕುಲ ಪುರೋಹಿತ ಡೆಪ್ಯುಟಿ ಚನ್ನಬಸಪ್ಪ. ಅವರು ಮಾಡಿದ ಕನ್ನಡ ಕಟ್ಟುವ ಕೆಲಸ ಅಮೋಘವಾದದ್ದು~ ಎಂದು ಸಾಹಿತಿ `ಪುಸ್ತಕಮನೆ~ ಹರಿಹರಪ್ರಿಯ ಹೇಳಿದರು.
ನಗರದ ಕೆಂಗೇರಿಯಲ್ಲಿ ಇತ್ತೀಚೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಕನ್ನಡದಲ್ಲಿ ಆಲೂರು ವೆಂಕಟರಾಯರಿಗೂ ಮೊದಲು ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿದ್ದವರು ಡೆಪ್ಯೂಟಿ ಚನ್ನಬಸಪ್ಪ. ಹೀಗಾಗಿ ಕನ್ನಡದ ಕುಲಪುರೋಹಿತರು ಆಲೂರು ವೆಂಕಟರಾಯರಲ್ಲ, ಬದಲಿಗೆ ಡೆಪ್ಯೂಟಿ ಚೆನ್ನಬಸಪ್ಪ ಅವರು. ಹಾಗೆಯೇ ಮಕ್ಕಳ ಸಾಹಿತ್ಯವನ್ನು ಮೊದಲು ರಚಿಸಿದವರು ಪಂಜೆ ಮಂಗೇಶರಾಯರೇ ಹೊರತು ಜಿ.ಪಿ.ರಾಜರತ್ನಂ ಅಲ್ಲ~ ಎಂದರು.
ಇಂಧನ ಸಚಿವೆ ಶೋಭಾ ಕರಂದ್ಲಾಜೆ ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ಸಮ್ಮೇಳನಕ್ಕೂ ಮುನ್ನ ಕೆಂಗೇರಿಯ ಪ್ರಮುಖ ರಸ್ತೆಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.
ಸಮ್ಮೇಳನದಲ್ಲಿ ಕವಿಗೋಷ್ಠಿ, ಜನಪದ ಗೀತ ಗಾಯನ ಮತ್ತು ವಿಚಾರ ಸಂಕಿರಣಗಳು ನಡೆದವು. ವಿವಿಧ ಕ್ಷೇತ್ರಗಳ ವೃತ್ತಿ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮ್ಮೇಳನದಲ್ಲಿ ಹಿರಿಯ ವಿದ್ವಾಂಸ ಡಾ.ಬನ್ನಂಜೆ ಗೋವಿಂದಾಚಾರ್ಯ, ಚಲನಚಿತ್ರ ನಟಿ ಜಯಮಾಲಾ, `ಪ್ರಜಾವಾಣಿ~ಯ ಸಹಾಯಕ ಸಂಪಾದಕ ಲಕ್ಷ್ಮಣ ಕೊಡಸೆ, ಸುದ್ದಿ ಸಂಪಾದಕ ಗಂಗಾಧರ ಮೊದಲಿಯಾರ್, ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಸ್.ಸುಧೀಂದ್ರ ಕುಮಾರ್ ಉಪಸ್ಥಿತರಿದ್ದರು.