ಬೆಂಗಳೂರು: ನಮ್ಮ ಮೆಟ್ರೊ ಸಂಸ್ಥೆ ಇನ್ನು ಮುಂದೆ ಎಲ್ಲ ವ್ಯವಹಾರಗಳನ್ನು ಕನ್ನಡದಲ್ಲೇ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆದೇಶ ನೀಡಿದರು.
ಟ್ರಾವೆಲ್ ಕಾರ್ಡ್ ಬಿಡುಗಡೆ ಸಂದರ್ಭದಲ್ಲಿ ಕಾಂಗ್ರೆಸ್ನ ನೆ.ಲ.ನರೇಂದ್ರ ಬಾಬು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಅವರು ಈ ಕುರಿತು ಒತ್ತಾಯ ಮಾಡಿದರು.
ಮೆಟ್ರೊ ಸಂಸ್ಥೆ ಸರ್ಕಾರದ್ದು. ಆದರೆ, ಅದು ಕೇವಲ ಇಂಗ್ಲಿಷ್ನಲ್ಲೇ ವ್ಯವಹರಿಸುತ್ತಿದೆ. ಇದು ಸರಿಯಲ್ಲ ಎಂದು ನರೇಂದ್ರ ಬಾಬು ಸಭೆಯಲ್ಲೇ ಆಕ್ಷೇಪಿಸಿದರು. ನಂತರ ಚಂದ್ರು ಮಾತನಾಡಿ, `ಮೆಟ್ರೊ ವೆಬ್ಸೈಟ್ ಕೂಡ ಇಂಗ್ಲಿಷ್ನಲ್ಲೇ ಇದೆ. ಅದನ್ನೂ ಕನ್ನಡದಲ್ಲಿ ಮಾಡಿಸಬೇಕು. ಪತ್ರಿಕಾ ಹೇಳಿಕೆ ಕೂಡ ಕನ್ನಡದಲ್ಲಿರಬೇಕು. ಟ್ರಾವೆಲ್ ಕಾರ್ಡ್ ಸೇರಿದಂತೆ ಎಲ್ಲವೂ ಕನ್ನಡದಲ್ಲಿ ಇರಬೇಕು ಎಂದು ಆಗ್ರಹಿಸಿದರು.
ನಂತರ ಮುಖ್ಯಮಂತ್ರಿ ಮಾತನಾಡಿ, ಇದೆಲ್ಲವನ್ನೂ ಗಮನಿಸಿದ್ದು, ಕನ್ನಡದಲ್ಲಿ ವ್ಯವಹರಿಸುವಂತೆ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಈ ರೀತಿಯ ಗೊಂದಲ ಇರಬಾರದು. ಈಗ ಆಗಿರುವ ಲೋಪಕ್ಕೆ ಮೆಟ್ರೊ ಕ್ಷಮೆ ಯಾಚಿಸಿದೆ ಎಂದು ಹೇಳಿದರು.