ನವದೆಹಲಿ: ಅಹಮದಾಬಾದಿನ ಉಪಗ್ರಹ ಆನ್ವಯಿಕ ಕೇಂದ್ರದ ನಿರ್ದೇಶಕ ಕನ್ನಡಿಗ ಆಲೂರು ಸೀಳಿನ್ ಕಿರಣ್ ಕುಮಾರ್ ಇಸ್ರೊದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಡಿಸೆಂಬರ್ 31ರಂದು ನಿವೃತ್ತರಾದ ಕೆ.ಎಸ್. ರಾಧಾಕೃಷ್ಣನ್ ಅವರ ಸ್ಥಾನವನ್ನು ಕಿರಣ್ ಕುಮಾರ್ ತುಂಬಲಿದ್ದು, ಮುಂದಿನ ಮೂರು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನೇತೃತ್ವ ವಹಿಸಲಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಿಂದ 1971ರಲ್ಲಿ ಪದವಿ ಪಡೆದ ಅವರು, 1973ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1975ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಿಂದ ಫಿಸಿಕಲ್ ಎಂಜಿನಿಯರಿಂಗ್ನಲ್ಲಿ ಎಂ.ಟೆಕ್ ಪದವಿ ಪಡೆದರು.
1975ರಲ್ಲಿ ಇಸ್ರೊಕ್ಕೆ ಸೇರಿದ ಮೇಲೆ ಭಾಸ್ಕರ (1979), ಚಂದ್ರಯಾನ–1 (2008) ಯೋಜನೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇತ್ತೀಚಿನ ಮಂಗಳಯಾನ ಯೋಜನೆಯಲ್ಲೂ ಪಾಲ್ಗೊಂಡಿದ್ದರು.