ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಲು ಹಿಂದಿ ನಟಿ ಹೇಮಾಮಾಲಿನಿಯವರನ್ನು ಬಿಜೆಪಿಯು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ.
ಕನ್ನಡಿಗರಾರು ಈ ಸ್ಥಾನಕ್ಕೆ ತಕ್ಕವರಾರು ದೊರೆಯಲಿಲ್ಲವೇ ಎಂಬುದು ಅತ್ಯಾಶ್ಚರ್ಯವನ್ನುಂಟು ಮಾಡಿದೆ. ಹೇಮಾಮಾಲಿನಿಯವರಿಗೆ ಕರ್ನಾಟಕದ ನುಡಿ, ಸಂಸ್ಕೃತಿ ಮತ್ತು ಸಮಸ್ಯೆಗಳ ಅರಿವು ಇಲ್ಲದಿರುವುದರಿಂದ ಇವರು ಕರ್ನಾಟಕವನ್ನು ಹೇಗೆ ಸಂಸತ್ತಿನಲ್ಲಿ ಪ್ರತಿನಿಧಿಸಬಲ್ಲರು?
ಈಗಾಗಲೇ ಬಿಜೆಪಿಯು ಎರಡು ಬಾರಿಯಿಂದ ಆಂಧ್ರ ಪ್ರದೇಶದ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡುತ್ತಲೇ ಇದೆ. ಈಗ ಹೇಮಾಮಾಲಿನಿಯ ಸರದಿ. ಕನ್ನಡದ ಪ್ರಾತಿನಿಧ್ಯವನ್ನು ಬೇರೆಯವರಿಗೆ ನೀಡುವುದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಮತ್ತು ಅವಮಾನ. ಆದ್ದರಿಂದ ಕನ್ನಡಿಗರು, ಅದರಲ್ಲೂ ಬಿಜೆಪಿಯ ಕಾರ್ಯಕರ್ತರು ತಮ್ಮ ಪಕ್ಷದ ನಿರ್ಧಾರವನ್ನು ವಿರೋಧಿಸುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿಹಿಡಿಯಬೇಕಾಗಿದೆ.