ಮುಂಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಜೀವಮಾನ ಸಾಧನೆಗೆ ನೀಡಲಾಗುವ ಸಿ.ಕೆ.ನಾಯ್ಡು ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.
ಇಲ್ಲಿ ನಡೆದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 7ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಗೌರವ ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಕ್ರಿಕೆಟ್ ಆಡಲು ಆರಂಭಿಸಿದ್ದು, ಆಟದ ಮೇಲಿನ ಪ್ರೀತಿಯಿಂದ. ಆಗ ನಮ್ಮ ಮನದಲ್ಲಿ ಪ್ರಶಸ್ತಿಗಳ ಆಲೋಚನೆಯೇ ಇರಲಿಲ್ಲ. ನಾನು ಆಡುವ ವೇಳೆ ಸಹಕಾರ ತೋರಿದ ತಂಡದ ನಾಯಕರಾಗಿದ್ದವರಿಗೂ ಹಾಗೂ ನನ್ನ ಕುಟುಂಬದವರಿಗೂ ಕೃತಜ್ಞನಾಗಿದ್ದೇನೆ’ ಎಂದು ಹೇಳಿದರು.
ಕಳೆದ ಋತುವಿನಲ್ಲಿ ಅಂತರರಾಷ್ಟ್ರೀ ಯ ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ತೋರಿರುವ ಆರ್.ಅಶ್ವಿನ್ಗೆ ‘ಪಾಲಿ ಉಮ್ರಿಗರ್’ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿ ಟ್ರೋಫಿ ಹಾಗೂ ರೂ 5ಲಕ್ಷ ಒಳಗೊಂಡಿದೆ.
ಕಳೆದ ರಣಜಿ ಋತುವಿನಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ ಮುಂಬೈನ ಅಭಿಷೇಕ್ ನಾಯರ್ ಅವರು ‘ಲಾಲಾ ಅಮರನಾಥ್ ಪ್ರಶಸ್ತಿ’ ಸ್ವೀಕರಿಸಿದರು. ಈ ಪ್ರಶಸ್ತಿ ಟ್ರೋಫಿ ಮತ್ತು ರೂ2.5 ಲಕ್ಷ ಮೊತ್ತ ಒಳಗೊಂಡಿದೆ.
ತವರು ಅಂಗಳದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ನೀಡಲಾಗುವ ‘ದಿಲೀಪ್ ಸರ್ದೇಸಾಯಿ ಪ್ರಶಸ್ತಿ’ಯನ್ನು ರೋಹಿತ್ ಶರ್ಮ ಪಡೆದರು. ಇದು ರೂ 5 ಲಕ್ಷ ನಗದು ಒಳಗೊಂಡಿದೆ.
ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಮಾಜಿ ಕ್ರಿಕೆಟಿಗರಾದ ಆರ್.ಜಿ. ನಾಡಕರ್ಣಿ, ಫಾರುಕ್ ಎಂಜಿನಿಯರ್ ಮತ್ತು ದಿವಂಗತ ಎಕನಾಥ್ ಸೋಲ್ಕಾರ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಈ ಪುರಸ್ಕಾರ ರೂ15 ಲಕ್ಷ ಮೊತ್ತ ಹಾಗೂ ಸ್ಮರಣಿಕೆ ಒಳಗೊಂಡಿದೆ.
2012–13ರ ಋತುವಿನಲ್ಲಿ ‘ಸಮಗ್ರ ಪ್ರದರ್ಶನ’ ನೀಡಿದ್ದಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆಗೆ ಇದೇ ವೇಳೆ ಪ್ರಶಸ್ತಿ ನೀಡಲಾಯಿತು.