ಬೆಂಗಳೂರು: ಕರ್ನಾಟಕದ ಪುರುಷರ ತಂಡ ಹೈದರಾಬಾದ್ನಲ್ಲಿ ಮುಕ್ತಾಯಗೊಂಡ ದಕ್ಷಿಣ ವಲಯ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ವಿರೋಚಿತ ಗೆಲುವು ದಾಖಲಿಸಿ, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಭಾನುವಾರ ರಾತ್ರಿ ಇಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ರಾಜ್ಯ ತಂಡ 12–11 ಪಾಯಿಂಟ್ಗಳಿಂದ ಸರ್ವೀಸಸ್ ತಂಡವನ್ನು ಮಣಿಸಿತು.
ರೋಚಕವಾಗಿದ್ದ ಪಂದ್ಯದ ಮೊದಲಾರ್ಧದಲ್ಲಿ 7–6 ಪಾಯಿಂಟ್ಗಳಿಂದ ಮುನ್ನಡೆ ಗಳಿಸಿದ್ದ ತಂಡ ಅಂತಿಮವಾಗಿ ಒಂದು ಅಂಕದಿಂದ ಜಯ ಸಾಧಿಸಿ ಸಂಭ್ರಮಿಸಿತು. ತಂಡದ ಪರ ಸಬೀರ್, ಪ್ರಶಾಂತ್, ಜೀವ ಕುಮಾರ್ ಮತ್ತು ರಘುನಂದನ್ ಉತ್ತಮ ಆಟ ಪ್ರದರ್ಶಿಸುವ ಮೂಲಕ ಗೆಲುವಿನ ರೂವಾರಿಗಳೆನಿಸಿದರು.
ಮಹಿಳೆಯರ ವಿಭಾಗದ ಫೈನಲ್ ಸೆಣಸಾಟದಲ್ಲಿ ಕರ್ನಾಟಕದ ಮಹಿಳಾ ತಂಡ 40–30 ಪಾಯಿಂಟ್ಗಳಿಂದ ಆಂಧ್ರಪ್ರದೇಶ ತಂಡವನ್ನು ಪರಾಭವಗೊಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ತಂಡದ ಪರ ಜಯಂತಿ, ಸುಶ್ಮಿತಾ ಪವಾರ್, ಉಷಾ ಹಾಗೂ ರಂಜಿತಾ ಪ್ರಭಾವಿ ಪ್ರದರ್ಶನ ತೋರಿದರು.
ಪುರುಷರ ತಂಡದ ಸಬೀರ್ ಉತ್ತಮ ರೈಡರ್, ರಾಜಗುರು ಉತ್ತಮ ಕ್ಯಾಚರ್ ಹಾಗೂ ಮಹಿಳಾ ತಂಡದ ಜಯಂತಿ ಉತ್ತಮ ಆಲ್ರೌಂಡರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.