ದಾವಣಗೆರೆ: ವಿಜಯಾ ಬ್ಯಾಂಕ್, ಕೆಎಸ್ಪಿ, ಆರ್ಡಬ್ಲುಎಫ್ ತಂಡಗಳು ದ್ರೋಣ ಕ್ರೀಡಾ ಸಮಿತಿ ವತಿಯಿಂದ ನಗರದ ನಾಟ್ಯಾಚಾರ್ಯ ಕುಲಕರ್ಣಿ ರಂಗಮಂದಿರದ ಆವರಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯ ಎರಡನೇ ದಿನವಾದ ಶನಿವಾರ ಸೆಮಿಫೈನಲ್ ಹಂತ ತಲುಪಿವೆ.
ಬೆಂಗಳೂರಿನ ಹೂಡಿ ಮತ್ತು ವಿಜಯಾ ಬ್ಯಾಂಕ್ ತಂಡಗಳ ನಡುವೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ಅರ್ಧದಲ್ಲಿ 11-0 ಅಂಕಗಳಿಂದ ಮುಂದಿದ್ದ ವಿಜಯಾ ಬ್ಯಾಂಕ್, ಅಂತಿಮವಾಗಿ 23-4 ಅಂತರದಿಂದ ಗೆಲುವು ಸಾಧಿಸಿತು.
ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಕೆಎಸ್ಪಿ ಮತ್ತು ಬಿಇಎಲ್ ನಡುವೆ ನಡೆದ ಸೆಣಸಾಟದ ಮೊದಲ ಅರ್ಧದಲ್ಲಿ 28-6 ಅಂಕಗಳಿಂದ ಕೆಎಸ್ಪಿ ತಂಡ ಮುಂದಿತ್ತು. ಅಂತಿಮವಾಗಿ ಅದು 40-15 ಅಂತರದಿಂದ ವಿಜಯ ಸಾಧಿಸಿತು.
ಆರ್ಡಬ್ಲುಎಫ್ ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ 37-11 ರಲ್ಲಿ ಬಿಸಿಪಿ ವಿರುದ್ಧ ಜಯ ಸಾಧಿಸಿತು. ವಿರಾಮದ ವೇಳೆಗೆ ವಿಜಯಿ ತಂಡ 15-7 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತ್ತು. ಅ. 23ರಂದು ಸಂಜೆ 5ರಿಂದ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.