ಖಾನಾಪುರ: ಕಬ್ಬಿಗೆ ಕನಿಷ್ಠ 3 ಸಾವಿರ ರೂಪಾಯಿ ದರವನ್ನು ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ಕಬ್ಬು ಬೆಳೆಗಾರರು ಪಟ್ಟಣದ ಜಗಜ್ಯೋತಿ ಬಸವೇಶ್ವರ ವೃತ್ತದ ಬಳಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಪ್ರತಿಭಟನಾಕಾರರು ಬಸವೇಶ್ವರ ವೃತ್ತದಲ್ಲಿ ಕುಳಿತು ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿ ಹಾಗೂ ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಹೆದ್ದಾರಿ ತಡೆ ನಡೆಸಿದರು.
ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಅನ್ಬುಕುಮಾರ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಸಂದರ್ಭದಲ್ಲಿ ಅರವಿಂದ ಪಾಟೀಲ ಮಾತನಾಡಿ, ರೈತರ ಕಬ್ಬಿಗೆ ನ್ಯಾಯವಾದ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳು ಕೊಡುತ್ತಿಲ್ಲ. ಕಳೆದ ವರ್ಷ ಲೈಲಾ ಶುಗರ್ಸ್ ಕಾರ್ಖಾನೆ 2000 ಪ್ರತಿ ಟನ್ನಂತೆ ಕಬ್ಬಿಗೆ ದರ ನೀಡಿದು,್ದ ಹಳೆಯ ಬಾಕಿ ಇನ್ನೂ 400 ರೂಪಾಯಿ ನೀಡುವುದರ ಮೂಲಕ 2300 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.
ಅರಣ್ಯದಿಂದ ಆನೆಗಳು ಗ್ರಾಮಗಳತ್ತ ಬರುತ್ತಿದ್ದು ಅವುಗಳು ತಡೆಯುವಲ್ಲಿ ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಅನ್ಬುಕುಮಾರ ಮಾತನಾಡಿ, ರಸ್ತೆ ತಡೆ ನಡೆಸಿ ಸಾಮಾನ್ಯ ಜನರಿಗೆ ತೊಂದರೆ ಮಾಡು ವುದು ಸರಿಯಲ್ಲ. ಕಬ್ಬಿನ ದರ ಕುರಿತು ಕಬ್ಬು ಆಯುಕ್ತರಿಗೆ ಮತ್ತು ಸರ್ಕಾರಕ್ಕೆ ಮನವಿ ರವಾನಿಸುವುದಾಗಿ ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ ನೇತೃತ್ವದಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ವಾಲಿ ಮತ್ತು ಪಿ.ಎಚ್. ಪಾಟೀಲ ಉಪಸ್ಥಿತರಿದ್ದರು.