ಬಾಗಲಕೋಟೆ: ಪ್ರಸಕ್ತ ಕಬ್ಬು ನುರಿಸುವ ಕಾರ್ಯ ಆರಂಭ ವಾಗಿದೆ, ಆದರೆ ಇದುವರೆಗೂ ಕಬ್ಬಿನ ಬೆಲೆ ನಿಗದಿಯಾಗದೇ ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಹಗ್ಗಜಗ್ಗಾಟದ ಪ್ರಹಸನ ಮುಂದುವರಿದಿದೆ.
ಒಂದೆಡೆ ಬೆಳೆಗಾರರ ಹೋರಾಟಕ್ಕೆ ಮಣಿಯ ಬಾರದು ಎಂಬುದು ಸಕ್ಕರೆ ಕಾರ್ಖಾನೆ ಮಾಲೀಕರ ಮನೋಭಾವ, ಇನ್ನೊಂದೆಡೆ ಹೋರಾಟದ ಮೂಲಕವೇ ಕಬ್ಬಿನ ದರ ನಿಗದಿ ಯಾಗಬೇಕು ಎಂಬುದು ರೈತ ಸಂಘದ ಮುಖಂಡರ ಲೆಕ್ಕಾ ಚಾರ. ಈ ನಡುವೆ ಜಿಲ್ಲೆಯ ಕಬ್ಬು ಬೆಳೆಗಾರ ನಲುಗುತ್ತಿದ್ದಾನೆ.
ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದು ದರ ನಿಗದಿ ಗೊಳಿಸಿದರೆ ಪ್ರತೀ ವರ್ಷ ಇದೇ ಹಾದಿ ಹಿಡಿಯುತ್ತಾರೆ, ಆ ಮೂಲಕ ದರ ನಿಗದಿ ರಾಜಕೀಯ ಆರಂಭವಾಗುತ್ತದೆ ಎಂಬು ದು ಕಾರ್ಖಾನೆ ಆಡಳಿತ ಮಂಡಳಿಯ ಅಳುಕು. ಈ ಕಾರಣ ವಾಗಿ ಕಳೆದ ನಾಲ್ಕೈದು ವರ್ಷದಿಂದ ದರ ನಿಗದಿ ಹೋರಾಟ ವರ್ಷದಿಂದ ವರ್ಷಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ ರೂ. 2200 ಬೆಲೆ ನೀಡಬೇಕು ಮತ್ತು ಬಾಕಿ ಮೊತ್ತವನ್ನು ತಕ್ಷಣ ರೈತರಿಗೆ ಪಾವತಿಸಬೇಕು ಎಂಬುದು ರೈತರ ಬೇಡಿಕೆ. ಆದರೆ ಸಕ್ಕರೆ ಕಾರ್ಖಾನೆಗಳು ಇದಕ್ಕೆ ಒಪ್ಪುದೇ ಈ ಸಾಲಿನ ದರ ನಿಗದಿ ಗೊಳಿಸದೇ ಕಬ್ಬು ನುರಿಸುವಿಕೆ ಆರಂಭ ಮಾಡಿವೆ.
ಇದರಿಂದ ರೈತರು ಆಕ್ರೋಶಗೊಂಡು ಕಳೆದ 18 ದಿನಗ ಳಿಂದ ಮುಧೋಳದಲ್ಲಿ ಧರಣಿ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಅವರು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ರೈತರ ಪ್ರತಿನಿಧಿಗಳೊಂದಿಗೆ ಮುಧೋಳ ತಹಸೀಲ್ದಾರ ಕಚೇರಿಯಲ್ಲಿ ಭಾನುವಾರ ನಡೆಸಿದ ಸಭೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ದಿನ ಬಳಕೆಯ ವಸ್ತುಗಳು ಸೇರಿದಂತೆ ರಸಗೊಬ್ಬರ, ಬೀಜ, ಕಾರ್ಮಿಕರ ಕೂಲಿ ಏರಿಕೆ ಯಾಗಿದೆ. ಜೊತೆಜೊತೆಗೆ ಸಕ್ಕರೆ ಬೆಲೆಯೂ ದುಪ್ಪಟ್ಟಾಗಿದೆ. ಇದರಿಂದ ಸಕ್ಕರೆ ಕಾರ್ಖಾನೆ ಮಾಲೀಕರು ಸಾಕಷ್ಟು ಲಾಭ ಪಡೆಯುತ್ತಿದ್ದಾರೆ. ಆದರೆ ನಾಲ್ಕು ವರ್ಷಗಳಿಂದಲೂ ರೈತರಿಗೆ ಒಂದೇ ರೀತಿಯ ಬೆಲೆ ನೀಡುತ್ತಿರುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚಿನ ವರ್ಷದಲ್ಲಿ ಕಬ್ಬಿನ ಇಳುವರಿಯಲ್ಲಿ ಶೇ. 30ರಷ್ಟು ಇಳಿಕೆ ಉಂಟಾಗಿದೆ. ಪ್ರವಾಹದಿಂದಾಗಿ ಮುಧೋಳ, ಜಮ ಖಂಡಿ ತಾಲ್ಲೂಕಿನ ಕೆಲವೆಡೆ ಕಬ್ಬು ಬೆಳೆಗೆ ಹಾನಿಯಾಗಿದೆ. ಅಲ್ಲದೇ ಉಪ ಉತ್ಪನ್ನಗಳಿಂದ ಕಾರ್ಖಾನೆಗಳಿಗೆ ಲಾಭ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಯುತ ಬೆಲೆ ನಿಗದಿ ಯಾಗಬೇಕು ಎಂಬುದು ರೈತರ ಆಗ್ರಹವಾಗಿದೆ.
ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರೈತ ಸಂಘದ ಮುಖಂಡ ರಮೇಶ ಗಡದಣ್ಣವರ, ಬೆಲೆ ಏರಿಕೆಯಾ ದಂತೆ ರೈತರ ಕಬ್ಬಿಗೂ ಹೆಚ್ಚಿನ ಬೆಲೆ ನೀಡಬೇಕು ಎಂದು ಹೇಳಿದರು.
ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ ರೂ. 2200 ದರ ನೀಡಲು ನಾವು ಮನವಿ ಮಾಡಿದ್ದೇವೆ. ಆದರೆ ಇದಕ್ಕೆ ಸಕ್ಕರೆ ಕಾರ್ಖಾನೆಗಳು ಒಪ್ಪುತ್ತಿಲ್ಲ. ಜೊತೆಗೆ 2009-10ನೇ ಸಾಲಿನ ಬಾಕಿ 72 ಕೋಟಿಗೂ ಹೆಚ್ಚು ವಿವಿಧ ಕಾರ್ಖಾನೆಗಳು ನೀಡಬೇಕಿದೆ ಎಂದರು.
ಈ ಬಾಕಿ ನೀಡಿ, ಪ್ರಸಕ್ತ ಸಾಲಿಗೆ ಕಬ್ಬಿನ ದರ ನಿಗದಿಗೊ ಳಿಸಲು ಎಲ್ಲ ಕಾರ್ಖಾನೆ ಆರಂಭಿಸುವಂತೆ ನಾವು ಮನವಿ ಮಾಡಿದ್ದೇವೆ, ಆದರೆ ಸಕ್ಕರೆ ಕಾರ್ಖಾನೆಗಳು ಮೊಂಡತನ ಪ್ರದರ್ಶಿಸುತ್ತಿವೆ. ವೈಜ್ಞಾನಿಕ ದರ ನಿಗದಿಗೊಳಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ನಿರಾಣಿ ಸಕ್ಕರೆ ಕಾರ್ಖಾನೆಯ ಪ್ರಮುಖರಾದ ಮಲ್ಲಿಕಾರ್ಜುನ ಹೆಗ್ಗಳಿಗಿ, ರೈತ ಸಂಘದ ಕೆಲ ಪ್ರತಿನಿಧಿಗಳು ರೈತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾ ರೆ. ಈಗಾಗಲೇ ಕೆಲ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವಿಕೆಗೆ ಚಾಲನೆ ನೀಡಿವೆ, ಕಬ್ಬು ಬೆಳೆಯದ ರೈತರದ್ದೇ ಹೋರಾಟ ನಡೆಯುತ್ತಿದೆ ಎಂದು ಆಪಾದಿಸಿದರು.
ಪ್ರಸ್ತುತ ರೈತರು ಬೆಳೆದ ಕಬ್ಬು ಕಟಾವಿಗೆ ಬಂದಿದೆ. ಕೂಡ ಲೇ ಕಾರ್ಖಾನೆಗೆ ಕಳುಹಿಸದಿದ್ದರೆ ಕಬ್ಬು ಒಣಗಿ ಹೋಗುತ್ತದೆ. ನಂತರ ಕಬ್ಬು ಕಳಿಹಿಸಿದರೂ ತೂಕ ಬರುವುದಿಲ್ಲ. ಬೆಲೆ ನಿಗದಿ ಪ್ರಹಸನದಿಂದ ಮಧ್ಯಮ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯಾಚರಿಸುತ್ತಿರುವ 9 ಸಕ್ಕರೆ ಕಾರ್ಖಾನೆಗಳಲ್ಲಿ ಈಗಾಗಲೇ ಒಂದೆರಡು ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಕಬ್ಬು ನುರಿಸುವಿಕೆಗೆ ಚಾಲನೆ ನೀಡಿವೆ.
ಲಗಾನಿ ಹೆಚ್ಚಳ: ಕಬ್ಬು ಕಟಾವು ವಿಲಂಬವಾದಂತೆ ಕಾರ್ಮಿಕ ರಿಗೆ ಕೊಡುವ ಲಗಾನಿಯೂ ಹೆಚ್ಚಳವಾಗುತ್ತದೆ. ಇದರಿಂದ ಕಬ್ಬು ಬೆಳೆಗಾರರಿಗೆ ಹೊರೆಯಾಗುತ್ತದೆ. 20 ಎಕರೆಗಿಂತ ಕಡಿಮೆ ಹೊಲ ಇರುವ ಕಬ್ಬು ಬೆಳೆಗಾರರಿಗೆ ಹೋರಾಟ ಬೇಡವಾಗಿದೆ. ಕಾರ್ಖಾನೆಗಳು ನ್ಯಾಯಯುತ ಬೆಲೆ ನೀಡಿದರೆ ಸಾಕು ಎನ್ನುವ ಮಾತು ಕೇಳಿಬರುತ್ತಿದೆ.
ಸರ್ಕಾರ ಮೂಕಪ್ರೇಕ್ಷಕನಾಗುವ ಬದಲು ತಕ್ಷಣ ಮಧ್ಯ ಪ್ರವೇಶಿಸಿ ವೈಜ್ಞಾನಿಕ ದರ ನಿಗದಿ ಮಾಡಿದಾಗ ಮಾತ್ರ ಸಮಸ್ಯೆ ಬಗೆಹರಿಯಬಲ್ಲದಾಗಿದೆ. ಪ್ರಸಕ್ತ ಸಾಲಿನ ಕಬ್ಬು ಅರೆಯುವ ಮುನ್ನ ಕಾರ್ಖಾನೆಗಳು, ರೈತರ ಕಬ್ಬು ನೋಂದಾವಣೆ ಪದ್ಧತಿ ಆಧಾರದಂತೆ ಕಬ್ಬು ಕಟಾವು ಮಾಡಲು ಜಿಲ್ಲಾಧಿಕಾರಿಗಳು ಕಾರ್ಖಾನೆಗಳಿಗೆ ಸೂಚನೆ ನೀಡಬೇಕು. ಅಲ್ಲದೇ ಕಬ್ಬು ದರ ನಿಗದಿಗಾಗಿ ರಚಿಸ ಲಾಗಿದ್ದ ಎಸ್ಎಪಿ ಸಮಿತಿತ ವರದಿಯನ್ನು ಜಾರಿಮಾಡುವ ಮೂಲಕ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಮುಂದಾಗಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.