ಬೆಂಗಳೂರು: ರೈತರಿಂದ ಖರೀದಿಸುವ ಪ್ರತಿ ಟನ್ ಕಬ್ಬಿಗೆ ₨ 2,500 ಪಾವತಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶ ಸರಿಯಲ್ಲ ಎಂದು ದೂರಿ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಸಂಘ (ಸಿಸ್ಮಾ) ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಸಕ್ಕರೆ ಕಾರ್ಖಾನೆಗಳು ಸಲ್ಲಿಸಬಹುದಾದ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡುವ ಮುನ್ನ ತನ್ನ ವಾದವನ್ನೂ ಆಲಿಸಬೇಕು ಎಂದು ಸರ್ಕಾರ ಈ ಮೊದಲೇ ಕೇವಿಯಟ್ ಸಲ್ಲಿಸಿತ್ತು. ಕಾರ್ಖಾನೆಗಳ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ, ಸರ್ಕಾರಕ್ಕೆ ನೋಟಿಸ್ ಜಾರಿಗೆ ಮಂಗಳವಾರ ಆದೇಶಿಸಿದ್ದಾರೆ. ಅರ್ಜಿಯ ವಿಚಾರಣೆ ಇದೇ 11ರಂದು ನಡೆಯಲಿದೆ.
ಈ ಸಾಲಿನ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ₨ 2,100 ಎಫ್ಆರ್ಪಿ (ನ್ಯಾಯಸಮ್ಮತ ಬೆಲೆ) ನೀಡಬೇಕು ಎಂದು ಕೇಂದ್ರ ಸರ್ಕಾರ ಫೆಬ್ರುವರಿಯಲ್ಲೇ ಆದೇಶ ಹೊರಡಿಸಿದೆ. ಇದಕ್ಕಿಂತ ಹೆಚ್ಚಿನ ದರ ನಿಗದಿ ಮಾಡುವ ಅಧಿಕಾರ ‘ಕಬ್ಬು ನಿಯಂತ್ರಣ ಮಂಡಳಿ’ಗೆ ಇಲ್ಲ ಎಂಬುದು ಕಾರ್ಖಾನೆಗಳ ವಾದ.