ರಾಮದುರ್ಗ: ತಾಲ್ಲೂಕಿನ ಉದಪುಡಿಯ ಶಿವಸಾಗರ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ನಾಗನೂರಿನ ಬಸವಗೀತಾ ಮಾತಾಜೀ, ಬಸವಪ್ರಕಾಶ ಸ್ವಾಮೀಜಿ ಮತ್ತು ಸಾಲಹಳ್ಳಿಯ ಸಾಯಿ ಮಠದ ರಮೇಶ ಚಾಲನೆ ನೀಡಿದರು.
ಕಾರ್ಖಾನೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಬಿ. ಪಾಟೀಲ ಮಾತನಾಡಿ, ಕಳೆದ ಹಂಗಾಮದಲ್ಲಿ ಕಾರ್ಖಾನೆಯು 10. 68 ಸಕ್ಕರೆ ಇಳುವರಿಯ ಜೊತೆಗೆ 1.91 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ 2.04 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ. ಕಬ್ಬು ಪೂರೈಸಿದ ರೈತರಿಗೆ ಮೊದಲನೇ ಕಂತಿನ ಹಣ ಪ್ರತಿ ಟನ್ ಕಬ್ಬಿಗೆ ರೂ.1800 ಈಗಾಗಲೇ ಪಾವತಿ ಮಾಡಲಾಗಿದೆ ಎಂದು ಹೇಳಿದರು.
ಕಬ್ಬು ಬೆಳೆಗಾರ ರೈತರ ಹಿತ ಕಾಪಾಡುವ ದೃಷ್ಟಿಯಿಂದ ರಾಮದುರ್ಗ ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಿಗೆ ಮತ್ತು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದವರಿಗೆ ಹೆಚ್ಚುವರಿಯಾಗಿ ಎರಡನೇ ಕಂತಿನ ರೂ. 150 ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಹಂಗಾಮಿನಲ್ಲಿ 3.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ಕಬ್ಬು ಬೆಳೆಯುವ ರೈತರಿಗೆ ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದಂತೆ ಈ ವರ್ಷದಲ್ಲಿಯೂ ಕಬ್ಬು ಪೂರೈಕೆ ಮಾಡಿ ಕಾರ್ಖಾನೆಯೊಂದಿಗೆ ಸಹಕರಿಸಬೇಕೆಂದು ಕೋರಿದ ಅವರು ಜಿಲ್ಲೆಯಲ್ಲಿ ಇತರೇ ಕಾರ್ಖಾನೆಗಳು ನಿಗದಿ ಪಡಿಸುವ ದರವನ್ನು ನೀಡಲು ಕಾರ್ಖಾನೆಯು ಸಿದ್ದವಿದೆ ಎಂದು ತಿಳಿಸಿದರು.
ಜ್ಯೋತಿಪ್ರಕಾಶ ಜೊಲ್ಲೆ, ಕಾರ್ಖಾನೆಯ ನಿರ್ದೇಶಕರಾದ ಆನಂದರಾವ ಕುಲಕರ್ಣಿ, ಅರುಣ ಹವಾಲ್ದಾರ, ಡಾ. ಜಿ. ಆರ್. ಸೂರ್ಯವಂಶಿ, ಕೆ. ಎಲ್. ಜಿನರಾಳಿ, ಮಂಜುನಾಥ ದೇಸಾಯಿ, ವೆಂಕನಗೌಡ ಪಾಟೀಲ, ಕಾರ್ಖಾನೆಯ ಮ್ಯೋನೇಜರ್ ಎನ್. ಎಸ್. ನಾಗರಾಳ, ಬಿ. ಎಸ್. ನಾಯ್ಕ, ಪ್ರಗತಿಪರ ರೈತ ಬಾಂಧವರು, ಕಾರ್ಖಾನೆಯ ಹಿತೈಷಿಗಳು, ಷೇರುದಾರರು ಪಾಲ್ಗೊಂಡಿದ್ದರು.