ಮದ್ದೂರು: ತಾಲ್ಲೂಕಿನ ಕೊಪ್ಪ ವ್ಯಾಪ್ತಿಯಲ್ಲಿ 6382 ಹೆಕ್ಟೆರ್ ಕಬ್ಬು ಸಂಪೂರ್ಣ ನಾಶವಾಗಿದ್ದು, ಸರ್ಕಾರ ಈ ಕೂಡಲೇ ನಷ್ಟಗೊಂಡ ಕಬ್ಬುಬೆಳೆಗಾರರಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಶಾಸಕ ಕೆ.ಸುರೇಶಗೌಡ ಭಾನುವಾರ ಆಗ್ರಹಿಸಿದರು.
ತಾಲ್ಲೂಕಿನ ಕೊಪ್ಪ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ನಂತರ ಸುದ್ದಿಗಾರರೊಡನೆ ಮಾತನಾಡಿದರು. ಕಳೆದ ಸಾಲಿನ ಕಬ್ಬಿನ ದರಕ್ಕೆ ಕೇವಲ ಮುಂಗಡ ನಿಗದಿ ಮಾಡಲಾಗಿದೆ ವಿನಃ ಇಂದಿಗೂ ಬೆಲೆ ನಿಗದಿಗೊಳಿಸಿಲ್ಲ. ಈ ಸಾಲಿನ ಕಬ್ಬಿಗೆ ಕನಿಷ್ಠ 3 ಸಾವಿರ ಮುಂಗಡ ನಿಗದಿಗೊಳಿಸಬೇಕಿದೆ. ಈ ಮೂಲಕ ನಷ್ಟಗೊಂಡಿರುವ ಕಬ್ಬು ಬೆಳೆಗಾರರಿಗೆ ಸರ್ಕಾರ ಸಹಾಯ ಮಾಡಬೇಕಿದೆ ಎಂದರು.
ಮೂರು ದಿನಗಳ ಕಾಲ ಉಪವಾಸ ಧರಣಿ ನಡೆಸಿದ ನಂತರ ಜಿಲ್ಲಾಡಳಿತ ಎಚ್ಚೆತ್ತು ಕೊಪ್ಪ ಕಡೇ ಭಾಗಕ್ಕೆ ನೀರು ಹರಿಸಲು ಮುಂದಾಯಿತು. ಆದರೆ ಇಂದಿಗೂ ನೀರಿನ ಹರಿವು ಕಡಿಮೆಯಾಗಿದ್ದು, ಕೊನೆ ಭಾಗಕ್ಕೆ ನೀರು ತಲುಪುವ ಭರವಸೆ ಇಲ್ಲ ಎಂದರು.
ಎಸ್.ಎಂ.ಕೃಷ್ಣ ಅವರನ್ನು ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರನ್ನಾಗಿಸಿದರೆ ನಮ್ಮ ಮುಕ್ತ ಸ್ವಾಗತವಿದೆ. ಅವರಿಗೆ ಮುಂದಿನ ಚುನಾವಣೆಯ ಸಾರಥ್ಯ ವಹಿಸಿದರೆ, ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ನಿಶ್ಚಿತ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಶಿವರಾಮು, ಮುಖಂಡರಾದ ಜಿ.ಕೃಷ್ಣೇಗೌಡ, ಶಂಕರ್, ಲಕ್ಷ್ಮಣ್ ಇದ್ದರು.