ಬೆಂಗಳೂರು: ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬು ಪಡೆದ 14 ದಿನಗಳಲ್ಲಿ ಹಣ ಪಾವತಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಮದ್ದೂರು ತಾಲ್ಲೂಕಿನ ಎ.ಸಿ. ಚಂದ್ರಶೇಖರ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ಇತ್ಯರ್ಥಪಡಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯ ಮೂರ್ತಿ ಎಸ್.ಎನ್. ಸತ್ಯನಾರಾಯಣ ಅವರನ್ನೊಳ ಗೊಂಡ ವಿಭಾಗೀಯ ಪೀಠ, ‘ನಿಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿ. ಸರ್ಕಾರ ಈ ಮನವಿಯನ್ನು ಪರಿಗಣಿಸಲಿ’ ಎಂದು ನಿರ್ದೇಶನ ನೀಡಿತು.
‘ಕಾರ್ಖಾನೆಗಳು ರೈತರಿಂದ ಕಬ್ಬು ಪಡೆದ 14 ದಿನಗಳಲ್ಲಿ ಅವರಿಗೆ ಹಣ ಪಾವತಿಸಬೇಕು. ತಪ್ಪಿದಲ್ಲಿ, ವಾರ್ಷಿಕ ಶೇಕಡ 15ರಷ್ಟು ಬಡ್ಡಿ ದರ ಸೇರಿಸಿ ಹಣ ಪಾವತಿಸಬೇಕು ಎಂದು 1966ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಕಬ್ಬು ನಿಯಂತ್ರಣ ಆದೇಶದಲ್ಲಿ ಹೇಳಲಾಗಿದೆ. ಇದನ್ನು ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯಲ್ಲಿ ಹೇಳಲಾಗಿದೆ. ವಿವಿಧ ಕಾರ್ಖಾನೆಗಳು ಒಟ್ಟು ₨ 161 ಕೋಟಿ ಬಾಕಿ ಇರಿಸಿಕೊಂಡಿವೆ’ ಎಂದು ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ಪೀಠಕ್ಕೆ ತಿಳಿಸಿದರು.