ಯಲಬುರ್ಗಾ: ತಾಲ್ಲೂಕಿನ ಕೊನಸಾಗರ ಗ್ರಾಮದ ಹುಸೇನಸಾಬ ಯಮನೂರಸಾಬ ನಾಯಕ ಅವರಿಗೆ ಸೇರಿದ 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಸುಮಾರು ರೂ. 4 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬುಧವಾರ ಬೆಳಿಗ್ಗೆ 7ಗಂಟೆ ಹೊತ್ತಿಗೆ ಬೆಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಆರಿಸಲು ಸುತ್ತಮುತ್ತಲಿನ ಹೊಲದವರು ಭಾರಿ ಪ್ರಯತ್ನ ನಡೆಸಿದರೂ ಬೆಂಕಿ ಮಾತ್ರ ಕಡಿಮೆಯಾಗದೇ ಹೊಲದ ತುಂಬೆಲ್ಲಾ ಹಬ್ಬಿ ಭಾರಿ ನಷ್ಟಕ್ಕೆ ಕಾರಣವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿಯೇ ಹೊಲದಲ್ಲಿದ್ದ ಬಹುತೇಕ ಬೆಳೆ ದಹನವಾಗಿತ್ತು. ಅವರೂ ಕೂಡಾ ಬೆಂಕಿ ನಂದಿಸಲು ಹರಸಾಹಸಪಟ್ಟರು.
ಒಂದೆರಡು ವಾರದಲ್ಲಿ ಕಟಾವ್ ಮಾಡಿ ಸಿರಗುಂಪಿ ಸಕ್ಕರೆ ಕಾರ್ಖಾನೆಗೆ ಕಳುಹಿಸುವ ಯೋಚನೆಯಲ್ಲಿದ್ದ ರೈತ ಈಗ ನಿರಾಸೆಯಲ್ಲಿದ್ದಾರೆ. ಘಟನೆಯ ಸುದ್ದಿ ತಿಳಿದ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯ ಎಎಸ್ಐ ಬೂದಿಯಪ್ಪ, ಕಂದಾಯ ನಿರೀಕ್ಷಕ ಹಾಗೂ ಕೃಷಿ ಸಹಾಯಕ ಬಸವರಾಜ ಭಜಂತ್ರಿ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯಿಂದಾದ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.