ಹುನಗುಂದ: ತಾಲ್ಲೂಕಿನ ಕಮತಗಿಯ ಅಂಗನವಾಡಿ ಕೇಂದ್ರ-4 ಮತ್ತು 1ರ ಆವರಣವನ್ನು ಶುಚಿಗೊಳಿಸಲಾಗಿದೆ. ಕೇಂದ್ರದ ಮುಂದೆ ಕೊಳಚೆ ನೀರು ಹರಿಯದಂತೆ ವ್ಯವಸ್ಥೆ ಮಾಡಲಾಗಿದೆ.
ಗ್ರಾ.ಪಂ. ಸದಸ್ಯ ರಾಜಕುಮಾರ ಐಹೊಳೆ, ಸರೋಜಿನಿ ಅಚನೂರ, ಅಧ್ಯಕ್ಷೆ ರತ್ನಾ ಸುಳ್ಳದ ಮತ್ತು ಪಿಡಿಒ ಎಸ್.ಜಿ. ಜಿತೂರಿ ಮತ್ತು ಮೇಲ್ವಿಚಾರಕಿ ಸುವರ್ಣ ಮಿರಜಕರ ಅವರ ಸಹಕಾರದೊಂದಿದೆ ಅಂಗನ ವಾಡಿ ಕೇಂದ್ರದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್.ಎಸ್.ನದಾಫ್ ತಿಳಿಸಿದ್ದಾರೆ.
ಕೇಂದ್ರ-4 ಕ್ಕೆ ತಡೆಗೋಡೆ ಮತ್ತು ಕೇಂದ್ರ-1ಕ್ಕೆ ಕಟ್ಟಡ ನಿರ್ಮಿಸಿಕೊಡ ಲಾಗುವುದು ಎಂದು ಪಂಚಾಯಿತಿ ಯವರು ಭರವಸೆ ನೀಡಿದ್ದಾರೆ. ಗ್ರಾಮ ದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
ಈಗಾಗಲೇ ವರದಿಯಾದಂತೆ ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ನೀಡಲು ಸೂಕ್ತ ಕ್ರಮ ಕೈಕೊಳ್ಳಲಾಗಿದೆ. 65 ಮಕ್ಕಳಲ್ಲಿ 58 ಮಕ್ಕಳಿಗೆ ವಿಶೇಷ ಆರೋಗ್ಯ ತಪಾಸಣೆ ಮಾಡಿಸಿ ಔಷಧೋಪಚಾರ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಔಷಧೋಪಚಾರಕ್ಕೆ ಅಗತ್ಯ ನೆರವು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.