ಮಸ್ಕಿ: ಮಾರಲದಿನ್ನಿ ತಾಂಡಾದ ಸಮೀಪ ಕುರಿ ಕಾಯುತ್ತಿದ್ದವರ ಮೇಲೆ ಶುಕ್ರವಾರ ಸಂಜೆ 6 ಗಂಟೆಗೆ ಕರಡಿ ದಾಳಿ ಮಾಡಿದೆ. ಉಮಾಪತೆಪ್ಪ (55) ಎಂಬುವರು ತೀವ್ರಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ಓಪೆಕ್ ಆಸ್ಪತ್ರೆ ಸೇರಿಸಲಾಗಿದೆ.
ಸಂಜೆ 6 ಗಂಟೆ ಸಮಯದಲ್ಲಿ ಕುರಿಗಳೊಂದಿಗೆ ಮಾರಲದಿನ್ನಿ ತಾಂಡಾಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಕರಡಿ ದಾಳಿಯಿಂದ ಉಮಾಪತೆಪ್ಪ ಎಂಬಾತನ ಒಂದು ಕಣ್ಣು ಸಂಪೂರ್ಣ ಕಿತ್ತಿಹೋಗಿದೆ. ಕರಡಿ ದಾಳಿಯನ್ನು ಗಮನಿಸಿದ ಸಮೀಪದ ಗ್ರಾಮಸ್ಥರು ಅಲ್ಲಿಂದ ಓಡಿಸಿದ್ದಾರೆ. ಗಾಯಗೊಂಡ ಉಮಾಪತೆಪ್ಪ ಅವರನ್ನು ಮಸ್ಕಿ ಅನ್ನಪೂರ್ಣ ನರ್ಸಿಂಗ್ ಹೋಮ್ ದಾಖಲಿಸಿ ಚಿಕಿತ್ಸೆ ಕೋಡಿಸಿದ್ದಾರೆ.
ವೈದ್ಯರ ಸೂಚನೆಯಂತೆ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ರಾಯಚೂರು ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಪಿಐ ಲಕ್ಷ್ಮೀನಾರಾಯಣ, ಪಿಎಸ್ಐ ಅಯ್ಯನಗೌಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವನ್ನು ವಿಚಾರಿಸಿದ್ದಾರೆ. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಬೆಲ್ಲದಮರಡಿ ಗ್ರಾಮದಲ್ಲಿ ಕರಡಿ ದಾಳಿ ನಡೆದಿತ್ತು. ಅಂದು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಕರಡಿಯನ್ನು ಹೊಡೆದು ಸಾಯಿಸಿದ್ದರು. ತಿಂಗಳ ಹಿಂದೆಯಷ್ಟೇ ಮಸ್ಕಿಯ ಅಶೋಕ ಶಿಲಾಶಾಸನ ಬಳಿ ಹಾಗೂ ಒಂದು ವಾರದ ಹಿಂದೆ ಗುಡದೂರು ಗ್ರಾಮದ ಹತ್ತಿರ ಕರಡಿ ಕಾಣಿಸಿಕೊಂಡಿತ್ತು.
ಮಸ್ಕಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಭಯಬೀತರಾಗಿರುವ ನಾಗರಿಕರು ಕರಡಿಗಳನ್ನು ಹಿಡಿಯುವಂತೆ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಒತ್ತಾಯಿಸಿದ್ದಾರೆ.