ಬೀದರ್: ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಕಚೇರಿ ಅವ್ಯವಸ್ಥೆಯ ಆಗರವಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ)ಯ ಕಾರ್ಯಕರ್ತರು ಗುರುವಾರ ನಗರದ ಪ್ರತಾಪನಗರ ಬಳಿ ಇರುವ ಮಂಡಳಿಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಚೇರಿಯಲ್ಲಿ 16 ಜನ ಸಿಬ್ಬಂದಿ ಇದ್ದರೂ ಒಂದಿಬ್ಬರು ಮಾತ್ರ ಹಾಜರಿರುತ್ತಾರೆ. ಕೂಡುವುದಕ್ಕೆ ಕುರ್ಚಿಗಳಿಲ್ಲ. ಎಲ್ಲೆಂದರಲ್ಲಿ ಸಾರಾಯಿ ಬಾಟಲಿ ಮತ್ತು ಇಸ್ಪಿಟ್ ಎಲೆಗಳನ್ನು ಬಿಸಾಡಲಾಗಿದೆ. ಅಲ್ಲದೇ ಕಚೇರಿ ಅನೈತಿಕ ಚಟುವಟಿಕೆಗಳ ತಾಣ ಆಗಿದೆ ಎಂದು ಆಪಾದಿಸಿದರು.
ಮಂಡಳಿ ಆಧೀನದಲ್ಲಿ 84 ಅಂಗಡಿಗಳಿವೆ. ಆದರೆ. 10 ಅಂಗಡಿಗಳು ಮಾತ್ರ ತೆರೆದಿದ್ದು, ಉಳಿದವು ಬಾಗಿಲು ಮುಚ್ಚಿಕೊಂಡಿವೆ. ಅದಾಗಿಯು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದರು. ಕೂಡಲೇ ಕಚೇರಿಯ ಅವ್ಯವಸ್ಥೆ ಸರಿಪಡಬೇಕು ಮತ್ತು ಮುಚ್ಚಿರುವ ಅಂಗಡಿಗಳಲ್ಲಿ ವ್ಯಾಪಾರ ಆರಂಭಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ)ಯ ಜಿಲ್ಲಾ ಅಧ್ಯಕ್ಷ ಗಣೇಶರೆಡ್ಡಿ, ಕಾರ್ಯಾಧ್ಯಕ್ಷ ಸೋಮನಾಥ ಎಸ್. ಮುಧೋಳಕರ್, ಉಪಾಧ್ಯಕ್ಷ ಸುಭಾಷ ಕೆನಡಿ, ಪಪ್ಪು ಭಾವಿಕಟ್ಟಿ, ಗುರುನಾಥ ಕುದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.