ಮಂಗಳೂರು: ‘ದೇಶದ ಕರಾವಳಿ ತೀರದ ಭದ್ರತೆ ದೃಷ್ಟಿಯಿಂದ ಪಶ್ಚಿಮ ಹಾಗೂ ಪೂರ್ವ ಕರಾವಳಿ ತೀರದಲ್ಲಿ ರಾಡಾರ್ ಅಳವಡಿಸಲಾಗುತ್ತಿದೆ. ಮುಂದಿನ ವರ್ಷದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಕೇಂದ್ರ ಸರ್ಕಾರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೆ ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನಗರಕ್ಕೆ ಶನಿವಾರ ಆಗಮಿಸಿದ್ದ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿದರು.
‘ದೇಶದ ವಿಶಾಲ ಕರಾವಳಿಯ ಭದ್ರತೆ ಬಲಪಡಿಸಲು ಸರ್ಕಾರ ಅನೇಕ ಕ್ರಮ ಕೈಗೊಂಡಿದ್ದು, ಇದರಲ್ಲಿ ರಾಡಾರ್ ಅಳವಡಿಕೆಯೂ ಒಂದು. ರಾಡಾರ್ ಅಳವಡಿಕೆ ಪೂರ್ಣಗೊಂಡ ಬಳಿಕ 24್ಡ7 ಕಾವಲು ಕಾಯುವುದು ಸುಲಭವಾಗಲಿದೆ’ ಎಂದರು.
ಮತ್ತೆ 180 ದೋಣಿ: ‘ಕರಾವಳಿ ಪಹರೆ ಬಲಪಡಿಸಲು ಯೋಜನೆಯ ಮೊದಲ ಹಂತದಲ್ಲಿ ಅತ್ಯಾಧುನಿಕ 210 ದೋಣಿಗಳನ್ನು ಖರೀದಿಸಲಾಗಿದೆ. ಎರಡನೇ ಹಂತದಲ್ಲಿ 180 ದೋಣಿ ಖರೀದಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಮಾರ್ಚ್ನಲ್ಲಿ ಆದೇಶ ಹೊರಬೀಳಲಿದೆ’ ಎಂದರು.
‘ಕರಾವಳಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಪರಹೆಗೆ ಸಂಬಂಧಿಸಿದ ಮೂಲ ಸೌಕರ್ಯ ಹೆಚ್ಚಿಸಲಾಗಿದೆ. ಕರಾವಳಿ ಕಾವಲು ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ’ ಎಂದರು.
ಅಪಹರಣ ಪ್ರಕರಣ: ಒಡಿಶಾ ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಅಪಹರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಿಲ್ಲಾಧಿಕಾರಿಹಾಗೂ ಜಿಲ್ಲಾ ನ್ಯಾಯಾಧೀಶರಿಗೆ ಈಗಾಗಲೇ ಸಾಕಷ್ಟು ಭದ್ರತೆ ಒದಗಿಸಲಾಗಿದೆ. ಭದ್ರತೆ ಹೆಚ್ಚಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಭದ್ರತೆ ಬಳಸಿಕೊಳ್ಳುವುದು ಜಿಲ್ಲಾಧಿಕಾರಿ ವಿವೇಚನೆಗೆ ಬಿಟ್ಟ ವಿಚಾರ. ಭದ್ರತೆ ವ್ಯವಸ್ಥೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸೂಚನೆ ನೀಡುವ ಅಗತ್ಯ ಕಾಣಿಸುವುದಿಲ್ಲ’ ಎಂದರು.