ಬೆಂಗಳೂರು: ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ಪ್ರತ್ಯೇಕವಾದ ಮರಳು ನೀತಿ ಜಾರಿಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಗುರುವಾರ ಇಲ್ಲಿ ತಿಳಿಸಿದರು.
ಆ ಮೂರು ಜಿಲ್ಲೆಗಳ ಪರಿಸ್ಥಿತಿಯೇ ಬೇರೆ ಇದೆ. ಪ್ರವಾಹ ಬಂದಾಗ ನದಿಯಿಂದ ಆಚೆಗೆ ಬರುವ ಮರಳನ್ನು ಮಾತ್ರ ತೆಗೆಯಬಹುದಾಗಿದೆ. ಹೀಗಾಗಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾದ ಮರಳು ನೀತಿ ಜಾರಿಗೆ ತರುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಕರಡು ತಯಾರಿಸುವಂತೆ ಸೂಚಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಲೋಕೋಪಯೋಗಿ, ಕಾನೂನು, ಗಣಿ ಮತ್ತು ಭೂ ವಿಜ್ಞಾನ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಸಭೆ ಸೇರಿ 4-5 ದಿನಗಳಲ್ಲಿ ಕರಡು ಸಿದ್ಧಪಡಿಸಲಿದ್ದಾರೆ. ಇದಾದ ನಂತರ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು. ಸದ್ಯ 90 ದಿನ ಮಾತ್ರ ಮರಳು ತೆಗೆಯಲು ಅವಕಾಶವಿದ್ದು, ವರ್ಷಪೂರ್ತಿ ಮರಳು ಗಣಿಗಾರಿಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇದೆ. ಆ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.
ಮರಳು ಮಾರಾಟದಿಂದ ಬರುವ ಆದಾಯದ ಶೇ 25ರಷ್ಟನ್ನು ರಾಜಧನದ ರೂಪದಲ್ಲಿ ಗ್ರಾಮ ಪಂಚಾಯಿತಿಗೆ ನೀಡಬೇಕಾಗುತ್ತದೆ. . ಕೇರಳಕ್ಕೆ ಮರಳು ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದೆ. ಆದರೆ ಗೋವಾಗೆ ಸಾಗಿಸಲು ಯಾವುದೇ ರೀತಿಯ ನಿರ್ಬಂಧವಿಲ್ಲ. ಮೊದಲಿನಿಂದಲೂ ಅವಕಾಶ ನೀಡಲಾಗಿದೆ ಎಂದರು.