ಕರೀನಾ ಅದೃಷ್ಟ ಕೈ ಕೊಟ್ಟಿದೆ. ಈಚೆಗೆ ಆಕೆ ನಟಿಸಿದ ಒಂದೂ ಚಿತ್ರಗಳು ಹೇಳಿಕೊಳ್ಳುವಂತ ಯಶಸ್ಸು ಗಳಿಸಲಿಲ್ಲ.
ಒಳ್ಳೆ ಚಿತ್ರಕಥೆ, ಮಾಗಿದ ಅಭಿನಯವಿದ್ದರೂ ಆಕೆಯ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿಲ್ಲ. ವೈಯಕ್ತಿಕವಾಗಿ ಕರೀನಾ ಬಹು ನಿರೀಕ್ಷೆ ಇರಿಸಿಕೊಂಡಿದ್ದ ‘ಗೋರಿ ತೇರಿ ಪ್ಯಾರ್ ಮೈನ್’ (ಈ ಚಿತ್ರಕ್ಕಾಗಿ ಕರೀನಾ ಚೆನ್ನೈ ಎಕ್ಸ್ಪ್ರೆಸ್್ ಚಿತ್ರದಲ್ಲಿ ನಟಿಸುವ ಆಫರ್ನ್ನು ತಿರಸ್ಕರಿಸಿದ್ದರು) ಚಿತ್ರ ಕೂಡ ಮಕಾಡೆ ಮಲಗಿಕೊಂಡಿತು. ಸದ್ಯಕ್ಕೆ ಕರೀನಾ ಈಗ ಒಂದು ಗೆಲುವಿಗಾಗಿ ಕಾಯುತ್ತಿದ್ದಾರೆ.
ಇದೇ ಕಾರಣಕ್ಕಾಗಿ ಕರೀನಾ ಈಗ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದವರಿಗೂ ಇಷ್ಟವಾಗುವಂಥಹ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸುವ ಆಸಕ್ತಿ ತೋರುತ್ತಿದ್ದಾರೆ.
ಹೌದು, ಕರೀನಾ ಈಗ ಪ್ರೇಕ್ಷಕರಿಗೆ ರಂಜನೆಯನ್ನಷ್ಟೇ ಉಣಬಡಿಸುವಂಥ ಚಿತ್ರಗಳಲ್ಲಿ ನಟಿಸಬೇಕು ಎಂದು ಮನಸ್ಸು ಮಾಡಿದ್ದಾರೆ. ಹೀಗಾಗಿ ಕರೀನಾ ಮಾಸ್ ನಿರ್ದೇಶಕರು ಅಂತ ಕರೆಯಿಸಿಕೊಂಡಿರುವ ರೋಹಿತ್ ಶೆಟ್ಟಿ ಮತ್ತು ದೇವ್ ಬೆನಗಲ್ ಅವರ ತಲಾ ಒಂದೊಂದು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ಎರಡು ಚಿತ್ರಗಳು ತನ್ನ ಚಿತ್ರ ಬದುಕನ್ನು ಬದಲಾಯಿಸಲಿವೆ ಎಂಬ ನಂಬಿಕೆ ಕರೀನಾ ಅವರದ್ದು.
‘ಕಮರ್ಷಿಯಲ್ ಚಿತ್ರಗಳ ನಟಿಯಾಗಿ ನಾನು ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ನಾನೀಗ ಮಾಸ್ಗೆ ಹತ್ತಿರವಾಗುವಂತ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬೇಕು ಅಂತ ನಿರ್ಧರಿಸಿದ್ದೇನೆ. ಮಾಸ್ ನಿರ್ದೇಶಕರಾದ ರೋಹಿತ್ ಶೆಟ್ಟಿ, ಬೆನಗಲ್ ರೀತಿ ಆನಂದ್ ರೇ, ಸುಧೀರ್ ಮಿಶ್ರಾ, ದಿವಾಕರ್ ಬ್ಯಾನರ್ಜಿ ಹಾಗೂ ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ ಜತೆಗೆ ಕೆಲಸ ಮಾಡುವ ಆಸೆ ಇದೆ’ ಎನ್ನುತ್ತಿದ್ದಾರೆ ಕರೀನಾ.
ಅಂದಹಾಗೆ, ದೇವ್ ಬೆನಗಲ್ ನಿರ್ದೇಶನದ ‘ಬಾಂಬೆ ಸಮುರಾಯ್’ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕರೀನಾಗೆ ಈ ಚಿತ್ರದಲ್ಲಿ ಫರ್ಹಾನ್ ಅಖ್ತರ್ ಜತೆಯಾಗಲಿದ್ದಾರೆ. ಅದೇ ರೀತಿ ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಂ 2’ ಚಿತ್ರಕ್ಕೆ ಕರೀನಾ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.