ಬೆಳಗಾವಿ: ನಗರದ ಕಸಾಯಿ ಗಲ್ಲಿಯ ಕರೋಶಿ ಜಮಾತ್ನ ಮುಖಂಡರು ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಫಿರೋಜ್ ಸೇಠ್ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಿದರು.
ಶಾಸಕ ಸೇಠ್ ಅವರು 5 ವರ್ಷಗಳ ಅವಧಿಯಲ್ಲಿ ಉತ್ತರ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಜಮಾತ್ನ ಮುಖಂಡರು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಫಿರೋಜ್ ಸೇಠ್, 5 ವರ್ಷದ ಅಧಿಕಾರದ ಅವಧಿಯಲ್ಲಿ ಅನೇಕ ಅನುಭವಗಳು ಆಗಿವೆ. ಸಮಾಜ ಸೇವೆಯಲ್ಲಿ ಸಿಗುವ ತೃಪ್ತಿ ಬೇರೆ ಯಾವ ಕ್ಷೇತ್ರದಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದರು.
ಪಾಲಿಕೆ ಸದಸ್ಯ ಬಾಬುಲಾಲ್ ಮುಜಾವರ ಮಾತನಾಡಿ, ಶಾಸಕರು ಉತ್ತರ ಕ್ಷೇತ್ರದ ಬಹುತೇಕ ಬಡಾವಣೆಗಳಲ್ಲಿ ಶಾಸಕ ಸೇಠ್ ಅವರು ಮೂಲ ಸೌಕರ್ಯ ಒದಗಿಸುವಲ್ಲಿ ಸಫಲ ರಾಗಿದ್ದಾರೆ ಎಂದರು.
ಫಿರೋಜ್ ಸೇಠ್ ಅವರು ಕಸಾಯಿ ಗಲ್ಲಿ, ಶೇರಿ ಗಲ್ಲಿ, ರುಕ್ಮಿಣಿ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ಮತಯಾಚಿಸಿದರು.
ರಾಜು ಸೇಠ್, ಸಿ.ಕೆ.ಎಸ್.ನಜೀರ, ಜಾವೇದ್ ಇನಾ ಮದಾರ, ಸಲೀಂ ಮಾರ್ಪಾನಿ, ಗಫೂರಸಾಬ ಬೆಪಾರಿ, ಹನೀಪ ಬಾರಗಾರ, ಬುಕಾರಿ, ಖಾಜಾ ಭಾಯಿ ದರ್ಗಾ, ಅಕ್ರಂ ಬಾಳೇಕುಂದ್ರಿ, ಮತಿನ್ಶೇಖ ಅಲಿ ಮತ್ತಿತರರು ಉಪಸ್ಥಿತರಿದ್ದರು.