ಕಿಕ್ಕೇರಿ: ಕರ್ತವ್ಯ, ಹಕ್ಕು ಬದುಕಿನ ಜತೆ ಜತೆಯಾಗಿ ಬರುವ ಪ್ರತಿಬಿಂಬಗಳಾಗಿವೆ ಎಂದು ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಶ್ರೀಧರ್ ಅಭಿಪ್ರಾಯಪಟ್ಟರು. ಸಮೀಪದ ಕೃಷ್ಣಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿಂದ ಬುಧವಾರ ಆಯೋಜಿಸಿದ್ದ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಅಂಗವಿಕಲರ ರಕ್ಷಣೆಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾರ್ಷಿಕ 1.25 ಲಕ್ಷ ರೂಪಾಯಿ ವರಮಾನ ಇರುವ ಎಲ್ಲರಿಗೂ ಉಚಿತ ಕಾನೂನು ನೆರವು ಸಿಗಲಿದೆ. ಮಕ್ಕಳನ್ನು ದೈಹಿಕ ಮಾನಸಿಕವಾಗಿ ಹಿಂಸಿಸಬಾರದು. ಅಂಗವಿಕಲರನ್ನು ಗೌರವಿಸಿ. ಅವರಿಗೆ ಸಿಗುವ ಸೌಲಭ್ಯಗಳನ್ನು ತಿಳಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಗೋಪಾಲಪ್ಪ, ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎ.ಬಿ.ಪುಟ್ಟಸ್ವಾಮಿಗೌಡ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಗೋಪಾಲಗೌಡ, ವಕೀಲರಾದ ಜಿ.ಆರ್.ಅನಂತರಾಮಯ್ಯ, ಚಂದ್ರಶೇಖರಯ್ಯ, ಪಲ್ಲವಿ, ಸರೋಜ, ಪ್ರತೀನಾರಾಂ, ಮುಖ್ಯ ಶಿಕ್ಷಕ ರಮೇಶ್ ಇದ್ದರು.