ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಸತತ 5ನೇ ಗೆಲುವು

ರಣಜಿ ಟ್ರೋಫಿ: ಮಯಂಕ್‌ ಅಜೇಯ ಅರ್ಧಶತಕ, ಉತ್ತರ ಪ್ರದೇಶ ಎದುರು ಕ್ವಾರ್ಟರ್‌ ಫೈನಲ್‌
Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಮನೀಷ್‌ ಪಾಂಡೆ, ಆಫ್‌ ಸ್ಪಿನ್ನರ್‌ ಮನೋಜ್‌ ಚೌಹಾಣ್‌ ಅವರ ಆರನೇ ಓವರಿನ ಮೊದಲ ಎಸೆತವನ್ನು ಲಾಂಗ್‌ಆನ್‌ಗೆ ಸಿಕ್ಸರ್‌ ಎತ್ತುತ್ತಿದ್ದಂತೆ ಕರ್ನಾಟಕದ ಆಟಗಾರರು ಪ್ರಸಕ್ತ ರಣಜಿ ಋತುವಿನಲ್ಲಿ ಸತತ ಐದನೇ ಗೆಲುವನ್ನು ಆಚರಿಸಿದರು. ದೆಹಲಿ ವಿರುದ್ಧದ ರಣಜಿ ಟ್ರೋಫಿ ‘ಎ’ ಗುಂಪಿನ ಅಂತಿಮ ಲೀಗ್‌ ಪಂದ್ಯವನ್ನು ಕರ್ನಾಟಕ ತಂಡ ಗುರುವಾರ 8 ವಿಕೆಟ್‌ಗಳಿಂದ ಸುಲಭವಾಗೇ ಗೆದ್ದುಕೊಂಡಿತು.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡಕ್ಕೆ ಕೊನೆಯ ದಿನ, ನಿರೀಕ್ಷೆಯಂತೆ ಆತಿಥೇಯರಿಂದ ಹೆಚ್ಚು ಪ್ರತಿರೋಧ ಎದುರಾಗಲಿಲ್ಲ. ದೆಹಲಿ ಎರಡನೇ ಇನಿಂಗ್ಸ್‌ 201 ರನ್‌ಗಳಿಗೆ ಪತನಗೊಂಡ ಮೇಲೆ ಗೆಲುವಿಗೆ ಬೇಕಾಗಿದ್ದ 115 ರನ್‌ಗಳ ಗುರಿಯನ್ನು ಕರ್ನಾಟಕ 28.1 ಓವರುಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ತಲುಪಿತು. ಆರಂಭ ಆಟಗಾರ ಮಯಂಕ್‌ ಅಗರವಾಲ್‌ ಅಜೇಯ 96 ಎಸೆತಗಳಲ್ಲಿ ಮೂರು ಸಿಕ್ಸರ್‌, ಆರು ಬೌಂಡರಿಗಳಿದ್ದ 68 ರನ್‌ ಹೊಡೆದು ಗೆಲುವಿಗೆ ಅಡಿಪಾಯ ಹಾಕಿಕೊಟ್ಟರು.

ಈ ಪಂದ್ಯಕ್ಕೆ ಮೊದಲೇ ಎಂಟರ ಘಟ್ಟ ಖಚಿತಪಡಿಸಿಕೊಂಡಿದ್ದ ವಿನಯ್‌ ಕುಮಾರ್‌ ಬಳಗ, ಇಲ್ಲಿ ಪಡೆದ ಆರು ಪಾಯಿಂಟ್‌ಗಳ ಮೂಲಕ ಒಟ್ಟಾರೆ ‘ಎ’ ಗುಂಪಿನಲ್ಲಿ 38 ಪಾಯಿಂಟ್ಸ್‌ ಸಂಗ್ರಹಿಸಿ ಪಾರಮ್ಯ ಮೆರೆಯಿತು. ಕರ್ನಾಟಕ, 1998–99ರ ರಣಜಿ ಸಾಲಿನಲ್ಲಿ ಬೆನ್ನುಬೆನ್ನಿಗೆ ಐದು ಪಂದ್ಯಗಳನ್ನು ಗೆದ್ದುಕೊಂಡಿತ್ತು, ನಂತರ ಇದೇ ಮೊದಲ ಬಾರಿ ಈ ಸಾಧನೆಯಾಗಿದೆ.

ಬುಧವಾರ, ಮೂರನೇ ದಿನದ ಕೊನೆಗೆ 6 ವಿಕೆಟ್‌ಗೆ 132 ರನ್‌ ಗಳಿಸಿದ್ದ ದೆಹಲಿ ತಂಡದ ಎರಡನೇ ಇನಿಂಗ್ಸ್‌ ಗುರುವಾರ 124 ನಿಮಿಷಗ ಳಲ್ಲಿ ಕೊನೆಗೊಂಡಿತು. ಭೋಜನ ವಿರಾಮದ (ವಿಕೆಟ್‌ ನಷ್ಟವಿಲ್ಲದೇ 6) ನಂತರ ಕರ್ನಾಟಕ ಮೊದಲ ಇನಿಂಗ್ಸ್‌ನ ಶತಕವೀರ ಕರುಣ್‌ ನಾಯರ್‌ ಅವರನ್ನು ಬೇಗನೇ ಕಳೆದುಕೊಂಡರೂ, ಮಂದಗತಿಯ ಪಿಚ್‌ನಲ್ಲಿ ದೆಹಲಿ ಬೌಲರ್‌ಗಳು ಅಪಾಯವೊಡ್ಡುವಂತೆ ಕಾಣಲಿಲ್ಲ.

ಮಯಂಕ್‌, ಬೇರೂರಿದ ಮೇಲೆ ಸ್ಪಿನ್ನರ್‌ಗಳನ್ನು ಮುಂದೆ ಬಂದು ದಂಡಿಸತೊಡಗಿದರು. ಆಫ್‌ ಸ್ಪಿನ್ನರ್‌ ಮನೋಜ್‌ ಚೌಹಾಣ್‌ ಅವರ ಒಂದೇ ಓವರಿನಲ್ಲಿ ಮಯಂಕ್‌ ಎರಡು ಸಿಕ್ಸರ್‌ ಸೇರಿದಂತೆ 16 ರನ್‌ ಬಾರಿಸಿದರು. ಇದರಲ್ಲಿ ಒಂದು ಕವರ್‌ಡ್ರೈವ್‌ ಬೌಂಡರಿಯೂ ಒಳಗೊಂಡಿತ್ತು. ಎಡಗೈ ಸ್ಪಿನ್ನರ್‌ ಮನನ್ ಶರ್ಮಾ ಕೂಡ ರನ್‌ವೇಗಕ್ಕೆ ಕಡಿವಾಣ ಹಾಕಲಾಗಲಿಲ್ಲ.

ಮಯಂಕ್‌ಗೆ ಉತ್ತಮ ಬೆಂಬಲ ನೀಡಿದ ಸಮರ್ಥ್‌ (20) ಎರಡನೇ ವಿಕೆಟ್‌ಗೆ 88 ರನ್‌ ಜತೆಯಾಟದಲ್ಲಿ ಭಾಗಿಯಾದರು. ಸಮರ್ಥ್‌ ನಿರ್ಗಮಿಸಿದಾಗ ಕರ್ನಾಟಕ ಗೆಲುವಿಗೆ ಬೇಕಿದ್ದುದು 12 ರನ್‌ಗಳಷ್ಟೇ. ಮನೀಷ್‌ ಪಾಂಡೆ (11, 1 ಸಿಕ್ಸರ್‌, 1 ಬೌಂಡರಿ) ಆ ವಿಧಿಯನ್ನು ಬೇಗನೇ ಈಡೇರಿಸಲು ನೆರವಾದರು.

ಬೆಳಿಗ್ಗೆ ದೆಹಲಿ ದಿನದ ಮೂರನೇ ಓವರಿನಲ್ಲಿ ಎಡಗೈ ಆಟಗಾರ ವರುಣ್‌ ಸೂದ್‌ (0) ಅವರನ್ನು ಕಳೆದುಕೊಂಡಿತು, ಮಧ್ಯಮ ವೇಗದ ಬೌಲರ್‌ ಶರತ್‌ ಎಸೆತದಲ್ಲಿ ಒಳಕ್ಕೆ ಹೊರಳಿದ ಚೆಂಡು ಬ್ಯಾಟ್‌–ಪ್ಯಾಡ್‌ ನಡುವೆ ನುಗ್ಗಿ ಅವರು ಬೌಲ್ಡ್‌ ಆದರು. ಸುಮಿತ್‌ ನರ್ವಾಲ್‌ (21) ಮತ್ತು ಆಶಿಷ್‌ ನೆಹ್ರಾ (14) ಕೆಲಕಾಲ ಪ್ರತಿರೋಧ ತೋರಿ 104 ಎಸೆತಗಳಲ್ಲಿ 40 ರನ್‌ ಸೇರಿಸಿದ್ದರು. ಅವರ ಜತೆಯಾಟದಿಂದ ದೆಹಲಿ ಎರಡನೇ ಇನಿಂಗ್ಸ್‌ನಲ್ಲೂ 200ರ ಗಡಿ ದಾಟಲು ನೆರವಾಯಿತು. ಕೊನೆಯ ಎರಡು ವಿಕೆಟ್‌ಗಳನ್ನು ಶ್ರೇಯಸ್‌ ಗೋಪಾಲ್‌ (23ಕ್ಕೆ3) ಪಡೆದರು. ಶರತ್‌ ಮತ್ತು ರೋನಿತ್‌ ಮೋರೆ ಕೂಡ ತಲಾ 3 ವಿಕೆಟ್‌ಗಳನ್ನು ಗಳಿಸಿದರು.

ಯುವ ತಂಡದ ಉತ್ತಮ ಪ್ರದರ್ಶನ– ವಿನಯ್‌ ಸಂತಸ
ನವದೆಹಲಿ: ‘ಈ ಯುವ ತಂಡ ಉತ್ಸಾಹದಿಂದ ಕೂಡಿದ್ದು, ಎಲ್ಲರೂ ತಮಗೆ ನೀಡಿದ ಅವಕಾಶ ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ’ ಎಂದು ಕರ್ನಾಟಕ ತಂಡದ ನಾಯಕ ಆರ್‌. ವಿನಯ್‌ ಕುಮಾರ್‌ ಸಂತಸ ವ್ಯಕ್ತಪಡಿಸಿದರು.

ದೆಹಲಿ ವಿರುದ್ಧ ರಣಜಿ ಟ್ರೋಫಿ ‘ಎ’ ಗುಂಪಿನ ಅಂತಿಮ ಲೀಗ್‌ ಪಂದ್ಯವನ್ನು ಫಿರೋಜ್‌ ಷಾ ಕೋಟ್ಲಾದಲ್ಲಿ ಗುರುವಾರ ಗೆದ್ದುಕೊಂಡ ನಂತರ ಅವರು ಪತ್ರಕರ್ತರ ಜತೆ ಮಾತನಾಡಿದರು. ಈ ಋತುವಿನಲ್ಲಿ ಅವಕಾಶ ಪಡೆದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಆಡುವ 11ರ ತಂಡ ಆಯ್ಕೆ ಮಾಡುವುದು ಕಷ್ಟವಾಗುವುದೇ ಎಂಬ ಪ್ರಶ್ನೆಗೆ, ‘ಹಾಗೇನಿಲ್ಲ. ಪಿಚ್‌, ಅಂದಿನ ಪರಿಸ್ಥಿತಿ ಅವಲೋಕಿಸಿ ಪಂದ್ಯಕ್ಕೆ ಮೊದಲು ಆಡುವ  ತಂಡ ನಿರ್ಧರಿಸಲಾಗುತ್ತದೆ’ ಎಂದು ಉತ್ತರಿಸಿದರು.

‘ದೆಹಲಿಯ ಪಿಚ್‌ಗಳಲ್ಲಿ ಚೆಂಡು ಹೆಚ್ಚಾಗಿ ಕೆಳಮಟ್ಟದಲ್ಲೇ ಹೊರಳುತ್ತದೆ. ಇದರ ಅರಿವಿದ್ದ ಕಾರಣ ನಾವು ಮೊದಲೇ ಯೋಜನೆ ಹಾಕಿ ಕೊಂಡಿದ್ದೆವು. ಮೂವರು ವೇಗದ ಬೌಲರ್‌ ಗಳನ್ನು ಬಳಸಿ ವಿಕೆಟ್‌ಗೆ ಬೌಲ್‌ ಮಾಡುವುದು ತಂತ್ರವಾಗಿತ್ತು. ಇದು ಯಶಸ್ವಿಯಾಯಿತು’ ಎಂದರು.
‘ಈ ಪಂದ್ಯವನ್ನೂ ನಾವು ಗಂಭೀರವಾಗಿ ತೆಗೆದುಕೊಂಡಿದ್ದೆವು. ಇನ್ನು ಮುಂದೆ ನಾಕೌಟ್‌ ಇರುವುದರಿಂದ ಪ್ರತಿ ಪಂದ್ಯವೂ ಮಹತ್ವ ದ್ದಾಗಿರುತ್ತದೆ’ ಎಂದು ವಿನಯ್‌ ಹೇಳಿದರು,

13 ವರ್ಷಗಳ ನಂತರ: ರಣಜಿಯಲ್ಲಿ ಕರ್ನಾಟಕ ಒಂದೇ ಋತುವಿನಲ್ಲಿ ಸತತ ಐದು ಪಂದ್ಯಗಳನ್ನು ಗೆಲ್ಲುತ್ತಿರುವುದು ಇದು ಮೂರನೇ ಬಾರಿ.  ಮೊದಲ ಬಾರಿ 1959–60ರಲ್ಲಿ ಮತ್ತು ಎರಡನೇ ಬಾರಿ 1998–99ರಲ್ಲಿ ಇಂಥ ಸಾಧನೆ ದಾಖಲಾಗಿತ್ತು.

ಸ್ಕೋರ್ ವಿವರ:
ದೆಹಲಿ: 1ನೇ ಇನಿಂಗ್ಸ್‌: 202
ಕರ್ನಾಟಕ: 1 ಇನಿಂಗ್ಸ್‌: 289

ದೆಹಲಿ: 2ನೇ ಇನಿಂಗ್ಸ್‌: 77.4 ಓವರುಗಳಲ್ಲಿ 201 
(ಬುಧವಾರ: 6 ವಿಕೆಟ್‌ಗೆ 132)
ಮಿಲಿಂದ್‌ ಕುಮಾರ್‌ ಔಟಾಗದೇ  31
ವರುಣ್‌ ಸೂದ್‌ ಬಿ. ಶರತ್‌  00
ನರ್ವಾಲ್‌ ಬಿ.ಅಬ್ರಾರ್‌ ಖಾಜಿ  21
ನೆಹ್ರಾ ಸ್ಟ. ಗೌತಮ್‌ ಬಿ. ಗೋಪಾಲ್‌  14
ಮನೋಜ್‌ ಚೌಹಾಣ್‌ ಸಿ. ಮನಿಷ್‌ ಪಾಂಡೆ ಬಿ. ಗೋಪಾಲ್‌  05

ಇತರೆ (ನೋಬಾಲ್‌ 2, ವೈಡ್‌ 1, ಲೆಗ್‌ಬೈ 4, ಬೈ 5)  12
ವಿಕೆಟ್‌ ಪತನ: 7–136 (ವರುಣ್‌ ಸೂದ್‌, 51.3), 8–176 (ಸುಮಿತ್‌, 68.5), 9–195 (ನೆಹ್ರಾ, 75.5), 10–201 (ಮನೋಜ್‌, 77.4).
ಬೌಲಿಂಗ್‌: ಆರ್‌.ವಿನಯ್‌ ಕುಮಾರ್‌ 15–3–46–0; ಎಸ್‌.ಎಚ್‌.ಶರತ್‌ 16–4–35–3; ರೋನಿತ್‌ ಮೋರೆ 16–3–39–3; ಸು್ಟವರ್ಟ್‌ ಬಿನ್ನಿ 3–0–14–0; ಶ್ರೇಯಸ್‌ ಗೋಪಾಲ್‌ 7.4–0–23–3;  ಅಬ್ರಾರ್‌ ಕಾಝಿ 16–7–18–1; ಆರ್‌.ಸಮರ್ಥ್‌ 4–0–17–0.

ಕರ್ನಾಟಕ: 2ನೇ ಇನಿಂಗ್ಸ್‌: 2 ವಿಕೆಟ್‌ಗೆ 116 (28.1 ಓವರ್‌)
ಮಯಂಕ್‌ ಅಗರವಾಲ್‌ ಔಟಾಗದೆ  68
ಕರುಣ್‌ ನಾಯರ್‌ ಎಲ್‌ಬಿಡಬ್ಲ್ಯು ಬಿ. ನರ್ವಾಲ್‌ 08
ಆರ್‌.ಸಮರ್ಥ್‌ ಬಿ. ಮನನ್‌ ಶರ್ಮಾ  20
ಮನೀಶ್‌ ಪಾಂಡೆ ಔಟಾಗದೇ  11
ಇತರೆ (ನೋಬಾಲ್‌ 3, ಲೆಗ್‌ಬೈ 2, ಬೈ 4)  09

ವಿಕೆಟ್‌ ಪತನ: 1–16 (ಕರುಣ್‌, 7.6), 2–104 (ಸಮರ್ಥ್‌, 27.4).
ಬೌಲಿಂಗ್‌: ಆಶಿಷ್‌ ನೆಹ್ರಾ 5–1–8–0; ಸುಮಿತ್‌ ನರ್ವಾಲ್‌ 9–2–24–1; ವರುಣ್ ಸೂದ್‌ 3.3–0–7–0; ಮನನ್‌ ಶರ್ಮಾ 5.3–0–26–1; ಮನೋಜ್‌ ಚೌಹಾಣ್‌ 5.1–0–45–0 (ನೋಬಾಲ್‌ 3).
ಪಂದ್ಯದ ಆಟಗಾರ: ಕರುಣ್‌ ನಾಯರ್‌




ರಣಜಿ ಇತರ ಪಂದ್ಯಗಳ ಫಲಿತಾಂಶ
–ಗುವಾಹಟಿ (ಸಿ ಗುಂಪು): ಮಹಾರಾಷ್ಟ್ರ 361 ಹಾಗೂ 134. ಅಸ್ಸಾಂ ಮೊದಲ ಇನಿಂಗ್ಸ್‌್ 152 ಮತ್ತು 72.4 ಓವರ್‌ಗಳಲ್ಲಿ 215. ಫಲಿತಾಂಶ: ಮಹಾರಾಷ್ಟ್ರಕ್ಕೆ 128 ರನ್‌ ಜಯ.

–ಭುವನೇಶ್ವರ್ (ಎ ಗುಂಪು): ಒಡಿಶಾ ಪ್ರಥಮ ಇನಿಂಗ್ಸ್‌್ 242 ಹಾಗೂ 97 ಓವರ್‌ಗಳಲ್ಲಿ 228ಕ್ಕೆ6. ಹರಿಯಾಣ ಮೊದಲ ಇನಿಂಗ್ಸ್‌್ 149 ಓವರ್‌ಗಳಲ್ಲಿ 626ಕ್ಕೆ4. ಫಲಿತಾಂಶ: ಡ್ರಾ

–ಜೈಪುರ (ಬಿ ಗುಂಪು): ಬರೋಡ ಮೊದಲ ಇನಿಂಗ್ಸ್‌್ 236 ಮತ್ತು 167. ರಾಜಸ್ತಾನ 333 ಹಾಗೂ ದ್ವಿತೀಯ ಇನಿಂಗ್ಸ್‌್ 13.4 ಓವರ್‌ಗಳಲ್ಲಿ 74ಕ್ಕೆ4. ಫಲಿತಾಂಶ: ರಾಜಸ್ತಾನಕ್ಕೆ 6  ವಿಕೆಟ್‌ ಗೆಲುವು

–ಅಗರ್ತಲ (ಸಿ ಗುಂಪು): ತ್ರಿಪುರ ಮೊದಲ ಇನಿಂಗ್ಸ್‌್ 280 ಹಾಗೂ 272. ಜಮ್ಮು ಮತ್ತು ಕಾಶ್ಮೀರ 325 ಹಾಗೂ ದ್ವಿತೀಯ ಇನಿಂಗ್ಸ್‌ 25 ಓವರ್‌ಗಳಲ್ಲಿ 87ಕ್ಕೆ2. ಫಲಿತಾಂಶ: ಡ್ರಾ.

–ಹೈದರಾಬಾದ್‌ (ಸಿ ಗುಂಪು): ಹೈದರಾಬಾದ್‌ 201 ಹಾಗೂ 429. ಕೇರಳ ಪ್ರಥಮ ಇನಿಂಗ್ಸ್‌್ 264 ಮತ್ತು 47 ಓವರ್‌ಗಳಲ್ಲಿ 146ಕ್ಕೆ2. ಫಲಿತಾಂಶ: ಡ್ರಾ

– ಲಖನೌ (ಬಿ ಗುಂಪು): ರೈಲ್ವೇಸ್‌ ಮೊದಲ ಇನಿಂಗ್ಸ್‌್ 167 ಓವರ್‌ಗಳಲ್ಲಿ 518ಕ್ಕೆ9 ಡಿಕ್ಲೇರ್ಡ್‌್. ಉತ್ತರ ಪ್ರದೇಶ ಪ್ರಥಮ ಇನಿಂಗ್ಸ್‌ 77  ಓವರ್‌ಗಳಲ್ಲಿ 3 ವಿಕೆಟ್‌ಗೆ 231. ಫಲಿತಾಂಶ: ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT