ನವದೆಹಲಿ (ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಸ್ಥಾನದಿಂದ ತೆಗೆದು ಹಾಕಿರುವ ಜಿ. ಭವಾನಿ ಸಿಂಗ್ ಅವರನ್ನು ಕರ್ನಾಟಕ ಸರ್ಕಾರದ ಯಾವುದೇ ಆಕ್ಷೇಪವಿಲ್ಲದೇ ನೇಮಿಸಲಾಗಿತ್ತು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
17 ವರ್ಷಗಳಷ್ಟು ಈ ಹಳೆಯ ಪ್ರಕರಣದಲ್ಲಿ ಎಸ್ಪಿಪಿ ನೇಮಕ ವಿವಾದ ಮತ್ತು ಅವರನ್ನು ಆ ಸ್ಥಾನದಿಂದ ತೆಗೆದುಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವಲೋಕಿಸಿರುವ ಸುಪ್ರೀಂಕೋರ್ಟ್, ಈ ಹುದ್ದೆಗೆ ಶಿಫಾರಸು ಮಾಡಿದ ನಾಲ್ವರು ಹಿರಿಯ ವಕೀಲರ ಪಟ್ಟಿಯಲ್ಲಿ ಭವಾನಿ ಸಿಂಗ್ ಅವರ ಹೆಸರು ಇರಲಿಲ್ಲ. ಅಂದಿನ ಕರ್ನಾಟಕ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಐದನೇ ಹೆಸರನ್ನು ಶಿಫಾರಸು ಮಾಡಿದ್ದರು. ಇದನ್ನು ಯಾವುದೇ ಆಕ್ಷೇಪವಿಲ್ಲದೇ ಒಪ್ಪಿಕೊಳ್ಳಲಾಗಿತ್ತು ಎಂದು ನ್ಯಾಯಾಲಯ ತಿಳಿಸಿದೆ.
‘ಈ ಕುರಿತು ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತೇ ಅಥವಾ ಇಲ್ಲವೇ ಎನ್ನುವುದನ್ನು ಪರಿಶೀಲಿಸಿದ್ದೇವೆ. ಈ ಸಂಬಂಧ ಕಾನೂನಿನ ಅನ್ವಯ ಸಮಾಲೋ ಚನೆ ನಡೆಸುವ ಅಗತ್ಯವಿತ್ತೆ ಅಥವಾ ಇಲ್ಲವೇ. ಯಾವುದೇ ರೀತಿಯ ಆಕ್ಷೇಪ ಎತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಅಲ್ಲದೇ ಎಸ್ಪಿಪಿ ಸಂಭಾವನೆ ಕೂಡ ಅಧಿಕ ಪ್ರಮಾಣದಲ್ಲಿ ನಿಗದಿಗೊಳಿಸಲಾಗಿತ್ತು. ದೆಹಲಿಯಲ್ಲಿರುವ ವಕೀಲರು ಮಾತ್ರ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಆದರೆ, ಭವಾನಿ ಸಿಂಗ್ ಕೂಡಾ ಅಧಿಕ ಸಂಭಾವನೆ ಪಡೆಯುತ್ತಿದ್ದರು’ ಎಂದು ನ್ಯಾಯಮೂರ್ತಿಗಳಾದ ಬಿ.ಎಸ್. ಚೌಹಾಣ್ ಮತ್ತು ಎಸ್.ಎ. ಬಾಬ್ಡೆ ಅವರು ಅಭಿಪ್ರಾಯಪಟ್ಟಿದ್ದಾರೆ.