ಬೀದರ್: ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಕರ್ಮಯೋಗ ಸಿದ್ಧಾಂತವು ಜಗತ್ತಿನ ಶ್ರೀಮಂತರು ಹಾಗೂ ಯಶಸ್ವಿ ಉದ್ಯಮಿಗಳಿಗೆ ಮಾರ್ಗದರ್ಶಿ ಸೂತ್ರವಾಗಿದೆ ಎಂದು ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಅಭಯಾನಂದ ಸ್ವಾಮೀಜಿ ಹೇಳಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮವು ಸ್ವಾಮಿ ವಿವೇಕಾನಂದರ 150ನೇ ಜಯಂತಿ ನಿಮಿತ್ತ ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವಿವೇಕ ಚಿಂತನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲ್ಗೆಟ್ಸ್ ತಮ್ಮ ಒತ್ತಡದ ನಡುವೆಯು ಸ್ವಾಮಿ ವಿವೇಕಾನಂದರ ಕರ್ವಯೋಗವನ್ನು ಅಧ್ಯಯನ ಮಾಡುತ್ತಾರೆ ಎಂದರು. ಜೀವನದಲ್ಲಿ ಯಶಸ್ಸು ಗಳಿಸುವುದಕ್ಕಾಗಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅನುಸರಿಸಬೇಕು ಎಂದರು.
ಸ್ಥಳೀಯ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮೇಧಾನಂದ ಸ್ವಾಮೀಜಿ ಭಜನೆ ನಡೆಸಿಕೊಟ್ಟರು. ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್, ಕೆ.ಆರ್.ಇ. ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಪ್ರಮುಖರಾದ ಬಿ.ಎಸ್. ಕುದರೆ, ಗುರುನಾಥ ಜ್ಯಾಂತಿಕರ್, ರೇವಣಸಿದ್ಧಪ್ಪ ಜಲಾದೆ ಮತ್ತಿತರರು ಉಪಸ್ಥಿತರಿದ್ದರು.
ಆದರ್ಶ ವಿದ್ಯಾರ್ಥಿ ಪರಿಶೋಧನಾ ಸ್ಪರ್ಧೆಯಲ್ಲಿ ಸಾಧನೆಗೈದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾಮಟ್ಟದ ಆದರ್ಶ ವಿದ್ಯಾರ್ಥಿ ಪರಿಶೋಧನಾ ಪರೀಕ್ಷೆಯಲ್ಲಿ 2 ಸಾವಿರ ರೂಪಾಯಿ ಪ್ರಥಮ, 1,500 ರೂಪಾಯಿ ದ್ವಿತೀಯ ಹಾಗೂ 1 ಸಾವಿರ ರೂಪಾಯಿಗಳ ತೃತೀಯ ಬಹುಮಾನ ನೀಡಲಾಯಿತು.
ವಿದ್ಯಾರ್ಥಿಗಳ ಹೆಸರು ಹೀಗಿವೆ. ಕನ್ನಡ ಮಾಧ್ಯಮ: ಅರವಿಂದ ಸಂಜುಕುಮಾರ ಮಳಚಾಪುರ (ಪ್ರಥಮ), ಪೂಜಾ ಹೋಕೆ ಬೀದರ್ (ದ್ವಿತೀಯ) ಮತ್ತು ನೀತಾ ಗುರುಲಿಂಗಪ್ಪ ಹುಡಗಿ (ತೃತೀಯ). ಆಂಗ್ಲ ಮಾಧ್ಯಮ: ಹಮಾನಿ ಜಿ. ಬೀದರ್ (ಪ್ರಥಮ), ವಿಶ್ವಾ ಪಾಂಚಾಳ್, ದೀಕ್ಷಾ ಜಗನ್ನಾಥ ಬೀದರ್ (ದ್ವಿತೀಯ) ಹಾಗೂ ಸೌರಭ ಸಂಜಯ ಬೀದರ್ (ತೃತೀಯ).