ಉಡುಪಿ:`ತಂಪು ಪಾನೀಯದಿಂದ ಆಗುವ ಹಾನಿ ಮತ್ತು ಹಾಲಿನ ಉಪಯೋಗದ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ~ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
ಮಣಿಪಾಲ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ `ವಿಶ್ವ ಕ್ಷೀರ~ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ತಂಪು ಪಾನೀಯ ಕುಡಿಸುವ ಪರಿಪಾಠ ಬೆಳೆಯುತ್ತಿದೆ. ಇದೇ ಸಂದರ್ಭದಲ್ಲಿ ಹಾಲಿನ ಉಪಯೋಗ ಕಡಿಮೆ ಆಗುತ್ತಿದೆ. ಆದ್ದರಿಂದ ಹಾಲಿನ ಸೇವನೆಯಿಂದ ಆಗುವ ಪ್ರಯೋಜನದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಬೇಕಾಗಿದೆ ಎಂದರು.
ಹಾಲಿನಲ್ಲಿ ಮಿಟಮಿನ್ ಬಿ2, ಕ್ಯಾಲ್ಸಿಯಂ, ಕಾರ್ಬೋ ಹೈಡ್ರೇಟ್ ಹಾಗೂ ಪ್ರೋಟಿನ್ ಅಂಶವಿರುತ್ತದೆ. ಇವೆಲ್ಲವೂ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ. ಮಕ್ಕಳ ಬೆಳವಣಿಗೆ ಅಗತ್ಯ ಇರುವ ಪರಿಪೂರ್ಣ ಪೌಷ್ಟಿಕತೆ ಹಾಲಿನಲ್ಲಿದೆ. ಮಾತ್ರವಲ್ಲದೆ ಮೆದುಳು, ಹೃದಯ ಹಾಗೂ ಎಲುಬಿನ ಬೆಳವಣಿಗೆಗೆ ಹಾಲಿನಲ್ಲಿರುವ ಪೋಷಕಾಂಶಗಳು ಪೂರಕವಾಗಿವೆ ಎಂದು ಅವರು ಮಾಹಿತಿ ನೀಡಿದರು.
ಹಾಲು ಸೇವನೆ ಮಾಡುವ ಮುನ್ನ ಅದರ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಬೇಕು. ಬೆಳ್ಳಗಿರುವುದೆಲ್ಲವೂ ಹಾಲಾಗಿರುವುದಿಲ್ಲ. ಈಗ ಕಲಬೆರೆಕೆ ಹಾಲಿನ ಹಾವಳಿ ಹೆಚ್ಚಾಗಿದೆ. ಕಲಬೆರಕೆ ಹಾಲು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಕಲಬೆರೆಕೆ ಹಾಲಿನ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಅಶೋಕ್ ಕಾಮತ್, ಪ್ರೊ. ದಯಾನಂದ ಶೆಟ್ಟಿ, ವೇಮನಾರಾಯಣ್, ವೇದಾವತಿ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.