ಕಲಾಕದಂಬ ಆರ್ಟ್ ಸೆಂಟರ್ ಸಿದ್ಧಿ ಗಣಪತಿ ದೇವಾಲಯ ಸಾಂಸ್ಕೃತಿಕ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಕಲಾವಿಕಸನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳು ಯಕ್ಷಗಾನ, ಜಾನಪದ ನೃತ್ಯಗಳನ್ನು ಪ್ರದರ್ಶಿಸಿ ರಂಜಿಸಿದರು.
ಚಿಕ್ಕಲಸಂದ್ರದ ಕೆಎಸ್ಆರ್ಟಿಸಿ ಬಡಾವಣೆ ಸಿದ್ಧಿ ಗಣಪತಿ ದೇವಾಲಯ ಆವರಣದಲ್ಲಿ ಬೇಸಿಗೆ ಶಿಬಿರದ ಸಮಾರೋಪ ಆಯೋಜಿಸಲಾಗಿತ್ತು.`ಮಕ್ಕಳಲ್ಲಿ ಕಲಾ ಆಸಕ್ತಿ ಬೆಳೆಸುವುದು ಅತ್ಯವಶ್ಯಕ ಹಾಗೂ ಕಲೆ, ಸಂಸ್ಕೃತಿ ಕುರಿತು ಚಿಕ್ಕ ವಯಸ್ಸಿನಿಂದಲೇ ಪರಿಚಯಿಸಬೇಕು. ಆ ನಿಟ್ಟಿನಲ್ಲಿ ಇಂಥ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತಿವೆ~ ಎಂದು ತ್ರಿನೇತ್ರ ರಂಗ ತಂಡದ ಪ್ರೇಮಾನಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಕುಮಾರ್ ಸಂಸ್ಥೆ ಲೆಕ್ಕ ಪರಿಶೋಧಕ ವಿಜಯಕುಮಾರ್, ಕಲಾವಿದ ರಾಧಾಕೃಷ್ಣ ಉರಾಳ ನಿರ್ದೇಶನದಲ್ಲಿ 25 ದಿನ ಶಿಬಿರ ನಡೆಯಿತು. ಶಿಬಿರದಲ್ಲಿ ನಾಟಕ ಚಿತ್ರ, ಕ್ಲೇ ಮಾಡೆಲಿಂಗ್, ಜಾನಪದ ನೃತ್ಯಗಳು ಹಾಗೂ ಚಿತ್ರ ಬಿಡಿಸುವವುದು ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಂಡು ಖುಷಿಪಟ್ಟರು.
ಶಿಬಿರಾರ್ಥಿಗಳು ಎಂ.ಎಸ್.ಮೂರ್ತಿಯವರ `ಕಿವುಡು ಸಾರ್ ಕಿವುಡು~ (ನಿರ್ದೇಶನ; ಅಜಯ್ ಪ್ರೀತಮ್) ನಾಟಕ ಪ್ರದರ್ಶನ ಮಾಡಿದರು. ಜತೆಗೆ ಶಿಶುನಾಳ ಶರೀಫರ ಗೀತೆಗಳು, ಮೂಕಾಭಿನಯ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಿದರು. ಬಿಬಿಎಂಪಿ ಸದಸ್ಯ ವೆಂಕಟಸ್ವಾಮಿ ನಾಯ್ಡು, ಸತ್ಯನಾರಾಯಣ, ಸಚ್ಚಿದಾನಂದ ಮೂರ್ತಿ ಇತರರು ಇದ್ದರು.