ಚಿಕ್ಕಮಗಳೂರು: ವಿಧಾನಮಂಡಲ ಕಲಾಪಗಳನ್ನು ಖಾಸಗಿ ವಾಹಿನಿಗಳು ನೇರವಾಗಿ ಸೆರೆ ಹಿಡಿದು ಪ್ರಸಾರ ಮಾಡುವುದನ್ನು ನಿರ್ಬಂಧಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ನಗರದಲ್ಲಿ ಸೋಮವಾರ ನಗರಸಭೆ ನೌಕರರ ಪುನಶ್ಚೇತನ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು `ಪ್ರಜಾವಾಣಿ~ ಜತೆ ಮಾತನಾಡಿದರು.
ಲೋಕಸಭೆಯಲ್ಲಿ ಇರುವಂತೆ ಸರ್ಕಾರಿ ಸ್ವಾಮ್ಯದ ವಾಹಿನಿ ಮಾತ್ರವೇ ಕಲಾಪವನ್ನು ಚಿತ್ರೀಕರಿಸಿ ನಂತರ ಖಾಸಗಿ ಚಾನೆಲ್ಗಳಿಗೆ ವಿತರಿಸುವ ವ್ಯವಸ್ಥೆಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಳ್ಳುವುದು ಸೂಕ್ತ. ಕೇಂದ್ರದಿಂದಲೂ ಈ ಬಗ್ಗೆ ಮಾರ್ಗದರ್ಶಿ ಸೂತ್ರ ಬಂದಿದ್ದು, ಪರಿಶೀಲಿಸಲಾಗುತ್ತಿದೆ.
ಈ ವಿಧಾನ ಅಳವಡಿಸಿಕೊಳ್ಳಲು ಹೆಚ್ಚು ವೆಚ್ಚವಾಗಬಹುದು. ಆದರೆ ಹಣದ ಸಮಸ್ಯೆಯೇನೂ ಎದುರಾಗುವುದಿಲ್ಲ. ಈ ಬಗ್ಗೆ ಸಾಕಷ್ಟು ಚಿಂತಿಸಿ ಕಾರ್ಯರೂಪಕ್ಕೆ ತರುವ ಉದ್ದೇಶವಿದೆ ಎಂದು ಅವರು ತಿಳಿಸಿದರು.