ಬದಿಯಡ್ಕ: `ಯಕ್ಷಗಾನ ಕಲೆಯ ಪೌರಾಣಿಕ ಸ್ತ್ರೀಪಾತ್ರಗಳ ವೈಭವಕ್ಕೆ ಕೊಕ್ಕಡ ಈಶ್ವರ ಭಟ್ಟರು ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ~ ಎಂದು ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿ ಹೇಳಿದರು.
ಎಡನೀರು ಮಠದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕೊಕ್ಕಡ ಈಶ್ವರ ಭಟ್ಟರಿಗೆ `ಪಾತಾಳ ಪ್ರಶಸ್ತಿ~ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಕ.ಸಾ.ಪ ಗಡಿನಾಡ ಘಟಕದ ಮಾಜಿ ಅಧ್ಯಕ್ಷ ಐ.ವಿ. ಭಟ್ ಅಧ್ಯಕ್ಷತೆ ವಹಿಸಿದ್ದರು. ಪಾತಾಳ ಪ್ರಶಸ್ತಿ ಶಾಲು, ಹಾರ, ಸ್ಮರಣಿಕೆ ಹಾಗೂ ರೂ 5 ಸಾವಿರ ಮೊತ್ತ ಒಳಗೊಂಡಿದೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ಹಿರಿಯ ಯಕ್ಷಗಾನ ಸ್ತ್ರೀ ಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್, ಹರಿಕೃಷ್ಣ ಪುನರೂರು, ಶ್ರೀರಾಮ ಪಾತಾಳ, ನಾ. ಕಾರಂತ ಪೆರಾಜೆ, ರಾಜೇಂದ್ರ ಕಲ್ಲೂರಾಯ, ಪೊಲ್ಯ ಅನಂತೇಶ್ವರ ಭಟ್, ಡಾ. ಬಿ.ಎನ್. ಮಹಾಲಿಂಗ ಭಟ್ ಇದ್ದರು.