ದಾವಣಗೆರೆ: ಜಾನಪದ ಕಲಾ ಪ್ರಕಾರಗಳ ಮೂಲಕ ಸರ್ಕಾರದ ಯೋಜನೆಗಳ ಬಗೆಗಿನ ಅರಿವನ್ನು ಗ್ರಾಮೀಣ ಜನರಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ಜನಪದ ಕಲಾವಿದರದ್ದಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವೀರೇಶ್ ಹನಗವಾಡಿ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗ, ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಜಿಲ್ಲಾ ಪಂಚಾಯ್ತಿ ಹಾಗೂ ಹರಿಹರ ತಾಲ್ಲೂಕು ಪಂಚಾಯ್ತಿ ಆಶ್ರಯದಲ್ಲಿ ಜನಪದ ಕಲಾವಿದರಿಗೆ ಎರಡು ದಿನಗಳ ಪುನರ್ಮನನ ಹಾಗೂ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಆಡುಭಾಷೆಯಲ್ಲಿ ಹಾಗೂ ಅವರಿಗೆ ಹತ್ತಿರವಾಗಿರುವ ಜನಪದ ಮಾಧ್ಯಮದ ಮೂಲಕ ಅರಿವು ಮೂಡಿಸಿದಾಗ ಅನಕ್ಷರಸ್ಥರಿಗೆ ಸರ್ಕಾರದ ಯೋಜನೆಗಳು ಅರ್ಥವಾಗಿ ಅವುಗಳ ಲಾಭ ಪಡೆಯುವಂತಾಗುತ್ತದೆ. ಈ ನಿಟ್ಟಿನಲ್ಲಿ ತರಬೇತಿ ಪಡೆಯುತ್ತಿರುವ ಕಲಾವಿದರ ಜವಾಬ್ದಾರಿ ದೊಡ್ಡದು ಎಂದರು.
`ಲ್ಯಾಬ್ ಟು ಲ್ಯಾಂಡ್~ ಯೋಜನೆ ಹರಿಹರ ತಾಲೂಕಿನಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ. ಅಲ್ಲಿ ಅದರ ಸದಸ್ಯರು ಗ್ರಾಮ ಪಂಚಾಯ್ತಿ ನಡೆಸುವ ಸಭೆಯ ಮಹತ್ವದ ಬಗ್ಗೆ, ಗ್ರಾಮಗಳ ನೈರ್ಮಲ್ಯ ಕಾಪಾಡುವುದು ಹಾಗೂ ಶೌಚಾಲಯ ನಿರ್ಮಾಣದ ಒಳಿತಿನ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡುತ್ತಿದ್ದಾರೆ. ಈ ಯೋಜನೆಯ ಕಾರ್ಯಗಳನ್ನು ಅಳವಡಿಸಿಕೊಳ್ಳಲು ಶ್ರವಣಬೆಳಗೊಳ ಹಾಗೂ ಕಾರ್ಕಳ ತಾಲ್ಲೂಕುಗಳು ಈಗಾಗಲೇ ಮುಂದಾಗಿವೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಗುತ್ತಿ ಜಂಬುನಾಥ್, ಸಂಗೀತ ಮತ್ತು ನಾಟಕ ವಿಭಾಗದ ಪ್ರಾದೇಶಿಕ ಉಪ ನಿರ್ದೇಶಕ ಪುರುಷೋತ್ತಮ್ ಗಂರ್ಗೊಡೆ, ಹರಿಹರ ತಾಲ್ಲೂಕು ಪಂಚಾಯ್ತಿ ಇಒ ಎಸ್.ಎನ್. ರಾಜ್ ಮತ್ತಿತರರು ಉಪಸ್ಥಿತರಿದ್ದರು.