ಬೆಂಗಳೂರು: `ಸಿನಿಮಾ ಕಲಾವಿದರು ಮತ್ತು ಚಿತ್ರ ಕಲಾವಿದರ ನಡುವೆ ಹಲವು ವಿಚಾರದಲ್ಲಿ ಭಿನ್ನತೆಯಿದ್ದರೂ, ಬಣ್ಣದ ನಂಟು ಇಬ್ಬರನ್ನೂ ಬೆಸೆದಿದೆ~ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಅನುರಾಧ ಹೇಳಿದರು.
ಕರ್ನಾಟಕ ಚಿತ್ರಕಲಾ ಪರಿಷತ್ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕೆ.ಕೆ. ಮಕಾಳಿ ಮತ್ತು ರಮೇಶ್ ಚವ್ಹಾಣ್ ಅವರ ಚಿತ್ರಕಲೆಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. `ಸೃಷ್ಟಿಯಾದ ಹೊಸ ಪಾತ್ರಕ್ಕೆ ಜೀವ ತುಂಬುವ ಕೆಲಸವನ್ನು ಸಿನಿ ಕಲಾವಿದರು ನಿರ್ವಹಿಸಿದರೆ, ರೇಖೆಗಳ ಮೂಲಕವೇ ಹೊಸ ಪಾತ್ರವನ್ನು ಸೃಜಿಸುವ ಚಾಕಚಕ್ಯತೆಯನ್ನು ಕಲಾವಿದರು ಪಡೆದಿದ್ದಾರೆ. ಚಿತ್ರಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ~ ಎಂದು ತಿಳಿಸಿದರು.
`ಸಮಕಾಲೀನ ವಸ್ತುವಿಷಯಗಳನ್ನಿಟ್ಟುಕೊಂಡು ಕಲಾವಿದರು ಕುಂಚದ ಕೈಚಳಕ ತೋರಿಸಿದ್ದಾರೆ. ಸದಾ ಒತ್ತಡದಲ್ಲಿರುವ ನಗರದ ಮಂದಿ ಇಂತಹ ಕಲೆಯನ್ನು ನೋಡಿ ಆಸ್ವಾದಿಸುವ ಅಗತ್ಯವಿದೆ~ ಎಂದು ತಿಳಿಸಿದರು.
ಪ್ರದರ್ಶನವು ಅ. 14ರ ವರೆಗೆ ನಡೆಯಲಿದೆ.