ಉಳ್ಳಾಲ: `ತುಳು ಭಾಷೆ ಉಳಿವು ಕಲಾವಿದರಿಂದ ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ ತುಳು ಹಾಡುಗಳ ಅಧ್ಯಯನ ಶಿಬಿರದಿಂದ ಕಲಾವಿದರು ಬೆಳೆಯಲು ಸಾಧ್ಯ~ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಅಭಿಪ್ರಾಯಪಟ್ಟರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಹಾಗೂ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಮಂಗಳೂರು ಜಂಟಿ ಆಶ್ರಯದಲ್ಲಿ ಭಾನುವಾರ ಮಕ್ಕಳಿಗಾಗಿ ಕೊಲ್ಯ ಶಾರದಾ ಸಭಾ ಸದನದಲ್ಲಿ ನಡೆದ `ತುಳು ಪದೋ ಕಲ್ಪುಲೆ~ ಸಂಗೀತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಗೀತ ಕ್ಷೇತ್ರದಲ್ಲಿ ತುಳು ಭಾಷಾ ಹಾಡುಗಳ ಅಧ್ಯಯನ ಮಾಡಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಂಗೀತ ವಿದ್ಯಾರ್ಥಿಗಳಿಗೆ ತುಳು ಹಾಡುಗಳ ಮನವರಿಕೆ ಮಾಡುತ್ತಿರುವ ಶಿಬಿರ ಸಂಘಟಕರ ಕಾರ್ಯ ಶ್ಲಾಘನೀಯ ಎಂದರು.
ಉದ್ಯಮಿ ನಿರ್ದೇಶಕ ಸದಾಶಿವದಾಸ್ ಪಾಂಡೇಶ್ವರ್, ವಿಜಯ ಬ್ಯಾಂಕಿನ ನಿವೃತ್ತ ಪ್ರಬಂಧಕ ವಕ್ವಾಡಿ ಶೇಖರ ಶೆಟ್ಟಿ, ಮಾಜಿ ತಾ.ಪಂ ಅಧ್ಯಕ್ಷ ರಾಮಚಂದ್ರ ಕುಂಪಲ, ಸೋಮೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮೇಶ್ ಕೊಲ್ಯ, ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಪ್ರಕಾಶ್.ಎಚ್, ಉಮೇಶ್ ಕುಲಾಲ್, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಸತೀಶ್ ಸುರತ್ಕಲ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ. ಬಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ರವೀಂದ್ರ ಪ್ರಭು ಮುಲ್ಕಿ, ಸಂಗೀತ ಬಾಲಚಂದ್ರ ಉಡುಪಿ, ತೋನ್ಸೆ ಪುಷ್ಕಳ ಕುಮಾರ್ ಭಾಗವಹಿಸಿದ್ದರು.
ಶಿಬಿರದಲ್ಲಿ 32 ಶಿಬಿರಾರ್ಥಿಗಳು ಭಾಗವಹಿಸಿದ್ದರು. ತುಳು ಭಕ್ತಿಗೀತೆ, ಭಾವಗೀತೆ ಹಾಗೂ ಜಾನಪದ ಗೀತೆಯ ಬಗ್ಗೆ ಅವರಿಗೆ ತರಬೇತಿಯನ್ನು ನೀಡಲಾಯಿತು.