ಗದಗ: ವೃತ್ತಿ ರಂಗಭೂಮಿ ಕಲಾವಿದರಿಗೆ ರೂ. 3 ಸಾವಿರ ಮಾಸಾಶನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ ಹೇಳಿದರು.
ನಾಟಕ ಅಕಾಡೆಮಿ ಹಾಗೂ ಗದುಗಿನ ರಂಗ ಚೇತನ ಸಹಯೋಗದೊಂದಿಗೆ ಶಾಂತಕವಿಗಳ ಸ್ಮರಣಾರ್ಥ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಲವು ಕಲಾವಿದರು ಆರ್ಥಿಕ ಸಮಸ್ಯೆಯಿಂದ ಜೀವನ ನಡೆಸಲು ಕಷ್ಟವಾಗಿದೆ.
ಸರ್ಕಾರ ನೀಡುವ ಮಾಸಾಶನ ಅವರ ಔಷಧ ವೆಚ್ಚಕ್ಕೆ ನೆರವಾಗಲಿದೆ. ಈಗ ನೀಡುತ್ತಿರುವ ಒಂದು ಸಾವಿರ ರೂಪಾಯಿ ಸಾಲದು. ಮೂರು ಸಾವಿರ ರೂಪಾಯಿ ನೀಡುವಂತೆ ಮನವಿ ಮಾಡಲಾಗಿದೆ. ಸಮೀಕ್ಷೆ ನಡೆಸಿ ಕಲಾವಿದರ ಪಟ್ಟಿ ಸಿದ್ದ ಪಡಿಸಲಾಗಿದೆ. ಮಾಸಾಶನ ಮಂಜೂರು ಆಗಲು 3-4 ತಿಂಗಳು ಬೇಕಾಗಬಹುದು ಎಂದು ಹೇಳಿದರು.
ಕಲಾವಿದರಿಗೆ ಆಶ್ರಯ ಯೋಜನೆಯಲ್ಲಿ ಜಿಲ್ಲೆಗೆ 20 ಮನೆಗಳನ್ನು ಹಂಚಿಕೆ ಮಾಡಬೇಕು. ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿ, ರಂಗಮಂದಿರ ಮತ್ತು ಸಾಹಿತ್ಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಸುವರ್ಣ ಮಂದಿರದ ಜಾಗದ ಸಮಸ್ಯೆಯೂ ಬಗೆಹರಿದಿದೆ. ಶೀಘ್ರದಲ್ಲಿಯೇ ಕೆಲಸ ಆರಂಭವಾಗಲಿದೆ ಎಂದು ಹೇಳಿದರು.
ಕಲಾವಿದರಾದ ಶಿವಯ್ಯಸ್ವಾಮಿ ಮುದೇನಗುಡಿ, ಪರಮೇಶ್ವರ ಪಡೇಸೂರ, ಬಸವರಾಜ ಕೋಳಿವಾಡ, ಕಲ್ಲಪ್ಪ ಹುಯಿಲಗೋಳ, ಸುಲೋಚನಾ ಶಿರಹಟ್ಟಿ, ಸುಶೀಲಮ್ಮ ಬಳ್ಳಾರಿ, ಅಂಬುಜಾ ಕುಮಟಾ ಅವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಚಿತ್ರ ಕಲಾವಿದ ಶಂಕರಗೌಡ ಪಾಟೀಲ ಸಂಗ್ರಹಿಸಿರುವ ವೃತ್ತಿ ರಂಗಭೂಮಿಗೆ ಸಂಬಂಧಿಸಿದ ಕಲಾವಿದರ ಪರಿಚಯದ ಪ್ರದರ್ಶನ ಏರ್ಪ ಡಿಸಲಾಗಿದೆ.
ಕಾರ್ಯಕ್ರಮದಲ್ಲಿ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ, ನಾಟಕ ಅಕಾಡೆಮಿ ಸದಸ್ಯೆ ಪರಿಮಳ ಕಲಾವಂತ, ಪುಣ್ಯಾಶ್ರಮದ ಕಲ್ಲಯ್ಯಜ್ಜ, ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.