ದಾಂಡೇಲಿ: `ದಕ್ಷಿಣೋತ್ತರ ಜಿಲ್ಲೆಯ ಕಲೆಯಾಗಿರುವ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಗರದಲ್ಲಿ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ಯಕ್ಷಗಾನ ಕಲಿಕಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ' ಎಂದು ಕಲಿಕಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಳೆದ ಮೂರ್ನಾಲ್ಕು ವರ್ಷಗಳಿಂದ ಕಲಾಶ್ರೀ ಸಂಸ್ಥೆ ನಗರದಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಮಳೆಗಾಲ ಹಾಗೂ ಬೇಸಿಗೆಯಲ್ಲಿ ಇಲ್ಲಿಯ ಯಕ್ಷಗಾನ ಪ್ರಿಯರಿಗೆ ಯಕ್ಷಗಾನದ ಉಚಿತ ಪ್ರದರ್ಶನ ನೀಡುತ್ತಿದೆ.
ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಮೂಲಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಬಡವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ ನೀಡುವ, ಪಠ್ಯದ ಜೊತೆಗೆ ಶಿಷ್ಯವೇತನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು' ಎಂದು ತಿಳಿಸಿದರು.
`ನಶಿಸುತ್ತಿರುವ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಮಹತ್ವಾಕಾಂಕ್ಷೆಯಿಂದ ಕಲಾಶ್ರೀ ಸಂಸ್ಥೆ ದಾಂಡೇಲಿಯಲ್ಲಿ ಶಾಲಾ ಕಾಲೇಜು ಮಕ್ಕಳಿಗಾಗಿ ಯಕ್ಷಗಾನ ಕಲಿಕಾ ಕೇಂದ್ರವನ್ನು ಪ್ರಾರಂಭಿಸುತ್ತಿದೆ. ತರಬೇತಿಯ ಖರ್ಚನ್ನಷ್ಟೇ ಅಭ್ಯರ್ಥಿಗಳಿಂದ ಸ್ವೀಕರಿಸಲಾಗುವುದು. ಕಲಿಕಾ ಕೇಂದ್ರದಿಂದ ಯಾವುದೇ ಲಾಭವನ್ನು ಕಲಾಶ್ರೀ ಸಂಸ್ಥೆ ಅಪೇಕ್ಷಿಸುವುದಿಲ್ಲ.
ದಾಂಡೇಲಿಯಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಲಿಕಾ ಕೇಂದ್ರದ ಮೂಲಕ ಇಲ್ಲಿಯ ಮಕ್ಕಳಿಂದ ಒಂದು ಯಕ್ಷಗಾನ ತಂಡವನ್ನು ರಚಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಪ್ರವೇಶ ಪಡೆಯಲು ಬಯಸುವವರು ಬಿ.ಎನ್.ವಾಸರೆ (9902043450), ಸುರೇಶ ಕಾಮತ (9448288154) ಇವರನ್ನು ಸಂಪರ್ಕಿಸಬಹುದು' ಎಂದರು.
ಸಂಸ್ಥೆಯ ಉಪಾಧ್ಯಕ್ಷ ಸುರೇಶ ಕಾಮತ, ವಿಷ್ಣುಮೂರ್ತಿ ರಾವ್, ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಸಂಸ್ಥೆಯ ಸದಸ್ಯರಾದ ಬಿ.ಎನ್.ವಾಸರೆ, ಚಂದ್ರು ಶೆಟ್ಟಿ, ಗಣೇಶ ಹೆಬ್ಬಾರ ಉಪಸ್ಥಿತರಿದ್ದರು.