ಮಂಗಳೂರು: ನಗರದ ಕಂಕನಾಡಿ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ಕಲುಷಿತ ಬಿಸಿಯೂಟ ಸೇವಿಸಿದ ಪರಿಣಾಮ 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ಮಧ್ಯಾಹ್ನ ಬಿಸಿಯೂಟ ಸೇವಿಸಿದ ಕೂಡಲೇ ವಿದ್ಯಾರ್ಥಿಗಳು ವಾಂತಿ ಬೇಧಿ ಮಾಡಲಾರಂಭಿಸಿದರು. ಶಾಲೆಯ ಶಿಕ್ಷಕರು ಆರಂಭದಲ್ಲಿ ಶಾಲೆಯಲ್ಲೆ ಚಿಕಿತ್ಸೆ ನೀಡಲು ಮುಂದಾದರು. ಸ್ವಲ್ಪ ಹೊತ್ತಿನಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಅಸ್ವಸ್ಥಗೊಂಡರು.
ಪರಿಸ್ಥಿತಿಯ ಗಂಭೀರತೆ ಅರಿತ ಆಸುಪಾಸಿನ ಹೂವಿನ ಅಂಗಡಿ ಮಾಲೀಕರು ವಿದ್ಯಾರ್ಥಿಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಸುಮಾರು 20ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.ಈ ಪೈಕಿ ಮೂವರು ವಿದ್ಯಾರ್ಥಿಗಳ ಸ್ಥಿತಿ ಹತೋಟಿಗೆ ಬಂದಿರಲಿಲ್ಲ.
ಬಿಸಿಯೂಟದಲ್ಲಿ ಹುಳ, ಪೇಪರ್ ತುಂಡು ಇತ್ತು. ಹಳಸಿದ ಆಹಾರ ನೀಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.