ಮೈಸೂರು: ಪ್ರಸ್ತುತ ದಿನಗಳಲ್ಲಿ ಜನರಿಗೆ ಕಲೆ ಮೇಲಿನ ಒಲವು ಕಡಿಮೆ ಯಾಗುತ್ತಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಹೇಳಿದರು.
ನಗರದ ಜಗನ್ಮೋಹನ ಅರಮನೆ ಯಲ್ಲಿ ಅಮರ ಕಲಾ ಸಂಘ ಏರ್ಪಡಿಸಿದ್ದ ಪರ್ವತವಾಣಿ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ರಂಗಕರ್ಮಿ ಎಚ್.ಎಸ್.ಉಮೇಶ್ ಅವರ `ಪರ್ವತ ಪಂಥನ~ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಮನೆಗೆ ಮನರಂಜನೆ ತಲುಪುತ್ತಿರುವ ಹಿನ್ನೆಲೆಯಲ್ಲಿ ರಂಗಭೂಮಿಯತ್ತ ಜನರು ಬರುವುದು ಕಡಿಮೆಯಾಗಿದೆ ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಮಾತನಾಡಿ, ಕೈಲಾಸಂ ನಾಟಕಗಳ ಯಶಸ್ವಿ ಪ್ರದರ್ಶನದಿಂದ ಪ್ರಭಾವಿತರಾಗಿ ಪರ್ವತವಾಣಿ ಅವರು 80ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದರು. ಆದರೆ ಕನ್ನಡ ರಂಗಭೂಮಿ ವಿಮರ್ಶಕರು ಗುರುತಿಸಲಿಲ್ಲ. ಪರ್ವತವಾಣಿ ಒಬ್ಬ ನಾಟಕಕಾರ, ನಿರ್ದೇಶಕ, ಮಾತುಗಾರ, ರಂಗ ಚಿಂತಕ, ಮಾನವೀಯತೆಯುಳ್ಳ ಮನುಷ್ಯ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ರಾಗೌ ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಸದಸ್ಯ ನಾ.ನಾಗಚಂದ್ರ, ಅಮರ ಕಲಾ ಸಂಘ ಕಾರ್ಯದರ್ಶಿ ರಾಘವೇಂದ್ರ ಹಾಜರಿದ್ದರು. ರಂಗಕರ್ಮಿ ರಾಜಶೇಖರ ಕದಂಬ ನಿರೂಪಿಸಿದರು.