ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ, ಸಾಹಿತ್ಯ ನಾಗರಿಕತೆಗೆ ಜೀವಾಳ

Last Updated 13 ಫೆಬ್ರುವರಿ 2012, 6:15 IST
ಅಕ್ಷರ ಗಾತ್ರ

ಶಿಗ್ಗಾವಿ: ನಾಡಿನ ಕಲೆ, ಸಾಹಿತ್ಯ ನಮ್ಮ ನಾಗರಿಕತೆ ಜೀವಾಳವಾಗಿದ್ದು, ಯಾವ ಭಾಷೆಗೆ ಕಲೆ, ಸಾಹಿತ್ಯವಿಲ್ಲವೊ ಅಂತಹ ಭಾಷಗೆ ಭವಿಷ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಕಚೇರಿ ಮೈದಾನದ ಆವರಣದಲ್ಲಿ ಭಾನುವಾರ ನಡೆದ  ಪಂಡಿತ ಪುಟ್ಟರಾಜ ಗವಾಯಿಗಳವರ ಕಲಾವಿದರ ಸಂಘವನ್ನು ಉದ್ಘಾಟಿಸಿ  ಅವರು ಮಾತನಾಡಿ, ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಯಿಂದ ನಾಡಿನ ಶ್ರೀಮಂತಿಕೆ ಹೆಚ್ಚಿಸಲು ಸಾಧ್ಯವಿದೆ. ಹೀಗಾಗಿ ಗಾನಯೋಗಿ ಪುಟ್ಟರಾಜರ ಕಲೆ, ಸಾಹಿತ್ಯದ ರುಚಿಯಿಂದ  ಜಗತ್ತಿನ ಮೂಲೆಯಲ್ಲಿ ನಾಡಿನ ಹೆಸರು ಖ್ಯಾತಿ ಹೊಂದಲು ಸಾಧ್ಯವಾಗಿದೆ ಎಂದರು."

ಯಾವ ಭಾಷೆ ವಿವಿಧ ರೀತಿಯ ಆಯಾಮಗಳನ್ನು ಹೆಚ್ಚಾಗಿ ಬಳಕೆಮಾಡುತ್ತಿದೆ. ಅಂತಹ ಭಾಷೆಗಳು ಇತರ ಭಾಷೆಗಳಿಗಿಂತ ಹೆಚ್ಚು ಪ್ರಚಲಿತವಾಗುತ್ತವೆ. ಅಲ್ಲದೆ ಜೀವಂತವಾಗಿ  ಬಹುಕಾಲದವರೆಗೆ ಜನಮನದಲ್ಲಿ ಶಾಶ್ವತವಾಗಿರುತ್ತವೆ. ಹೀಗಾಗಿ ಸರ್ಕಾರ ಸಂಗೀತ, ಕಲೆ, ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಕಲಾವಿದರ ಮಾಸಾಶನ, ಕಲಾಭವನ ಸೇರಿದಂತೆ ಹೊಸ ಯೋಜನೆಗಳನ್ನು ಇನ್ನೂ ಹೆಚ್ಚಿಸುವ ಚಿಂತನೆ ಸರ್ಕಾರದ ಮುಂದಿದೆ ಎಂದರು.

ರಾಜ್ಯದಲ್ಲಿ ಕಲೆ, ಸಾಹಿತಿಗಳ ತವರೂರಿನ ಕೇಂದ್ರ ಶಿಗ್ಗಾವಿಯಾಗಿರುವುದರಿಂದ ದೇಶದ ಪ್ರಥಮ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡಿದೆ. ಅಲ್ಲದೆ ಶಿಗ್ಗಾವಿಯಲ್ಲಿ ಕಲಾಭವನ ಸಿದ್ಧವಾಗುತ್ತಿದೆ. ಅದಕ್ಕೆಲ್ಲ ಪುಟ್ಟರಾಜ ಗವಾಯಿಗಳ ಆಶೀರ್ವಾದವೇ ಕಾರಣ ಎಂದರು.

ಸರ್ಕಾರ ಸುಮಾರು ಐದು ಕೋಟಿ ರೂ.ಗಳ ಅನುದಾನದಲ್ಲಿ ಗದಗದಲ್ಲಿ ಪುಟ್ಟರಾಜ ಗವಾಯಿಗಳ ಸ್ಮಾರಕವನ್ನು ಸಿದ್ಧಗೊಳಿಸುವ ಮೂಲಕ ಕಲಾಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಿದೆ. ಅಂತಹ ದೈವತ್ವ ಪುರುಷ, ದೈವಿಶಕ್ತಿ ಹೊಂದಿದ ಪುಟ್ಟರಾಜರ ಹೆಸರಿಗೆ ಮೆರುಗು ತರುವಂತಹ ಕೆಲಸಗಳನ್ನು ಈ ಸಂಘ ಆಯೋಜಿಸಲಿ ಎಂದು ಹೇಳಿದರು.

ಪಂಡಿತ ಪುಟ್ಟರಾಜ ಗವಾಯಿ ಕಲಾವಿದರ ಸಂಘದ ಅಧ್ಯಕ್ಷ ಪಕ್ಕೀರಪ್ಪ ಕೊಂಡಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.

ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ರಾಮು ಪೂಜಾರ, ಕಲಾವಿದರ ಸಂಘದ ಗೌರಾವಾಧ್ಯಕ್ಷ ಕೊಟ್ರೇಶ ಮಾಸ್ತರ ಬೆಳಗಲಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಾದೇವ ಚಾಕಲಬ್ಬಿ, ಜಿಪಂ. ಸದಸ್ಯರರಾದ ಬಿ.ಟಿ.ಇನಾಮತಿ, ಸರೋಜಾ ಆಡಿನ, ಸಿ.ಎಸ್.ಪಾಟೀಲ, ಶಶಿಧರ ಹೊನ್ನಣ್ಣವರ, ತಾಪಂ. ಅಧ್ಯಕ್ಷ ವೀರನಗೌಡ್ರ ಪಾಟೀಲ, ಉಪಾಧ್ಯಕ್ಷೆ ಶಾಂತಮ್ಮ ಬೊಮ್ಮನಹಳ್ಳಿ, ಸದಸ್ಯರಾದ ಗೀತಾ ಹಂಚಿನಮನಿ, ಸುಜಾತಾ ಕಲ್ಲಕಟ್ಟಿ, ತಹಶೀಲ್ದಾರ ಕೊಟ್ಟೇಶ, ಎಪಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ ಸೇರಿದಂತೆ ಕಲಾವಿದರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಶಿವಾನಂದ ಹೊಸಮನಿ ಸ್ವಾಗತಿಸಿದರು. ಜಾನಪದ ಕಲಾವಿದ ಬಸವರಾಜ ಶಿಗ್ಗಾವಿ ನಿರೂಪಿಸಿ, ವಂದಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT