ರಾಯಚೂರು ಜಿಲ್ಲೆಯ ಸಾಹಿತಿಗಳು, ಕಲಾವಿದರು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರ ಶ್ರೀಮಂತವಾಗಲು ವಿಶಿಷ್ಟ ಕೊಡುಗೆ ನೀಡಿದ್ದಾರೆ.
ಸಾಹಿತಿ ಶಾಂತರಸ ಹೆಂಬೇರಾಳು, ಬಂಡಾಯ ಸಾಹಿತಿ ಜಂಬಣ್ಣ ಅಮರಚಿಂತ, ಬಿ.ಟಿ ಲಲಿತಾ ನಾಯಕ, ಅಲ್ಲಮಪ್ರಭು ಬೆಟ್ಟದೂರು, ಮುಕ್ತಾಯಕ್ಕ, ಜಯಲಕ್ಷ್ಮೀ ಮಂಗಳಮೂರ್ತಿ, ಕಾದಂಬರಿಗಾರ್ತಿ ರಾಧಾದೇವಿ, ಕಥೆಗಾರರಾದ ಅಮರೇಶ ನುಗಡೋಣಿ, ರಾಜಶೇಖರ ನೀರಮಾನ್ವಿ, ವಿ.ಎಸ್ ಕಾಂತನವರ, ಪಂಚಾಕ್ಷರಿ ಹಿರೇಮಠ, ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಜಾಲಹಳ್ಳಿಯ ಶೆಟ್ಟಿ ವೀರಭದ್ರಪ್ಪ, ಕಲ್ಲೂರು ಲಿಂಗಣ್ಣ ಕವಿ, ವೀರ ಹನುಮಾನ್, ಶೇಖರಪ್ಪ ಹೂಲಗೇರಿ, ರಾಮಣ್ಣ ಹವಳೆ, ಸಂಶೋಧಕ ಅಮರೇಶ ಯತಗಲ್ ಮತ್ತಿತರರು ಜಿಲ್ಲೆಯ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದ ಪ್ರಮುಖರು. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲರು ಇದೇ ಜಿಲ್ಲೆಯವರು. ಅವರು ಲೇಖಕರೂ ಹೌದು. ಈಗ ಜಿಲ್ಲೆಯಲ್ಲಿ ಹೊಸ ತಲೆಮಾರಿನ ಹಲವಾರು ಕಥೆಗಾರರು ಹಾಗೂ ಲೇಖಕರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಇನ್ನು, ಸಂಗೀತ ಕ್ಷೇತ್ರದಲ್ಲಿ ಪಂಡಿತ ಸಿದ್ಧರಾಮ ಜಂಬಲದಿನ್ನಿ, ಪ್ರಸಿದ್ಧ ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಾಟಿ, ಮಾಣಿಕರಾವ್ ರಾಯಚೂರಕರ್, ವಾಯುಜೀವೋತ್ತಮಾಚಾರ್, ತಬಲಾ ಪಟು ದೇವಪುತ್ರ, ಶೇಷಪ್ಪ ಗವಾಯಿ, ಗಜಲ್ ಗುಂಡಮ್ಮ, ಗೌಸ್ ಮಾಸ್ಟರ್ ಪುರತಿಪ್ಲಿ, ರೆಹಮಾನವ್ವ ಕುಕನೂರು, ಶಿವಕುಮಾರಿ, ಅಂಬಯ್ಯ ನುಲಿ, ಶೇಷಗಿರಿದಾಸ್ ಹೀಗೆ ಅನೇಕ ಕಲಾವಿದರು ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದ್ದಾರೆ.
ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಚಿತ್ರಕಲೆ ಅಭ್ಯಾಸ ಮಾಡಿ ಬಂದವರು ಎಂಬ ಹೆಗ್ಗಳಿಕೆಯ ಶಂಕರಗೌಡ ಬೆಟ್ಟದೂರು, ತೈಲವರ್ಣ ಚಿತ್ರ ಕಲಾವಿದ ಹೀರಾಲಾಲ್ ಮಲ್ಕಾರಿ ಇದೇ ಜಿಲ್ಲೆಯವರು.