ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯ ಅನುಸಂಧಾನಗಳ ದರ್ಶನ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೆ.ಕೆ. ಮಕಾಳಿ, ಬಿಜಾಪುರದಂಥಹ ಚಾರಿತ್ರಿಕ ಗ್ರಾಮೀಣ ಪ್ರದೇಶದಿಂದ ಬಂದವರು, ಸಹಜವಾಗಿಯೇ ಅವರ ಕಲಾಭ್ಯಾಸದ ಸಂದರ್ಭದಿಂದಲೂ ರೇಖೆ, ಬಣ್ಣಗಳ ಕೌಶಲ್ಯದ ರಮ್ಯತೆಗೆ ತೆರೆದುಕೊಂಡವರು. ನಂತರ ಇಲ್ಲಸ್ಟ್ರೇಶನ್, ಜಲವರ್ಣ ಚಿತ್ರಕಲೆ, ಪುಸ್ತಕ ವಿನ್ಯಾಸಗಳ ವೃತ್ತಿಪರ ಕಲೆಯ ಮಾಧ್ಯಮದಲ್ಲಿ ಸಾಕಷ್ಟು ಯಶಸ್ವಿ ಪ್ರಯೋಗಗಳನ್ನು ಮಾಡಿದ್ದಾರೆ.
 
ಈ ಎಲ್ಲಾ ಅನುಭವಗಳ, ಸಾಹಿತ್ಯ, ಸಂಸ್ಕೃತಿಯ ಒಡನಾಟಗಳೊಂದಿಗೆ ಅವರ ಕಲೆಯ ಅನುಸಂಧಾನ ಹೇಗೆ ದುಡಿಸಿಕೊಂಡಿದೆ ಎನ್ನುವುದು ಅವರ ಸುಮಾರು ಎರಡು ದಶಕದ ಕಲಾಕೃತಿಗಳನ್ನು ನೋಡುವಾಗ ಅನಿಸುವುದು ಸಹಜ.

ಆದರೆ ಈಚಿನ ಕಲಾಕೃತಿಯನ್ನು ಗಮನಿಸುವಾಗ ಅವರ ಹಿಂದಿನ `ನಡೆ~ಯನ್ನು ಬಿಟ್ಟು ಹೊಸ ಪ್ರಯತ್ನದೆಡೆಗೆ ನಿಧಾನವಾಗಿ ಹೆಜ್ಜೆ ಇಡುವ ಒಂದು ಸ್ವಾಗತಾರ್ಹ ಪ್ರಯತ್ನವನ್ನು ಗುರುತಿಸಬಹುದು.

ಅವರ ಕೃತಿಗಳು ಕೌಶಲ್ಯದಿಂದ, ಸೃಜನಶೀಲವಾಗಿ, ಸಾತ್ವಿಕವಾಗಿ, ಸಾತ್ವಿಕತೆಯಿಂದ ತಾತ್ವಿಕ ನೆಲೆಯಲ್ಲಿ ನಿಲ್ಲದೆ ಕಲಾಕೃತಿಯ ಅಂತಿಮ ನೆಲೆಯಾದ ಅನನ್ಯತೆಯ ಕಡೆಗೆ ನಿಧಾನವಾಗಿಯಾದರೂ ಸಾಗಬಹುದು ಹಾಗೇ ಆಗುವುದು ದೇಸಿ ಚಿಂತನೆಗೆ ಗಾಂಭೀರ್ಯವನ್ನು ಘನತೆಯನ್ನು ತಂದುಕೊಡಬಲ್ಲುದು.

ಚವಾಣ್ ಚಮತ್ಕಾರ

ರಮೇಶ್ ಚವಾಣ್, ಬಿಜಾಪುರದ ಗ್ರಾಮೀಣ ನೆಲೆಯಿಂದ ಬಂದ ಮಹತ್ವಾಕಾಂಕ್ಷೆಯ ಯುವ ಕಲಾವಿದ. ಈವತ್ತಿನ ಕಲೆಯ ಆಕರ್ಷಣೆಗೆ, ಅದರ ಚಮತ್ಕಾರಿಕೆಗೆ ಮಾರುಹೋದವರು.

ಈ ಪ್ರದರ್ಶನದಲ್ಲಿನ ಕೃತಿಗಳಲ್ಲಿ ವಿಡಂಬನೆ ಇದೆ, ಅತಾರ್ಕಿಕವಾದ ವರ್ಣಸಂಯೋಜನೆ ಇದೆ, ಆಶ್ಚರ್ಯವೆನ್ನುವಂತೆ ರಮೇಶ್ ತಮ್ಮ ನೆಲದ ಸಂವೇದನೆಗಳ ಕುರಿತಂತೆ ಅವರ ಆಲೋಚನೆಗಳಿಗೆ ದೃಶ್ಯಕ್ಕೆ ಸಂಚಲನಕ್ಕೆ ಗಮನ ನೀಡದಿರುವುದು ಪ್ರಧಾನವಾಗಿ ಕಾಣುತ್ತದೆ.      

ಇಲ್ಲಿನ ಅವರ ಕಲಾಕೃತಿಗಳನ್ನು ನೋಡುವಾಗ, ಅವುಗಳ ನಿರೂಪಣೆ, ಶೈಲಿ, ಬಣ್ಣಗಳ ಸಂಯೋಜನೆ ಇತ್ಯಾದಿಗಳು ಆಧುನಿಕ ಕಲೆಯ ನಿರೂಪಣೆಯ ಪ್ರಭಾವ ಎದ್ದು ಕಾಣುತ್ತದೆ. ಸಾಕಷ್ಟು ರಚನಾ ಸಾಮರ್ಥ್ಯವಿರುವ ರಮೇಶ್ ಅವರ ಕಲಾಕೃತಿಗಳಲ್ಲಿ ಸಮಚಿತ್ತ ಮತ್ತು ಬದ್ಧತೆ ಸಾಧ್ಯವಾದರೆ ಅನೇಕ ನವ್ಯ ಕಲಾವಿದರ ತಾಂತ್ರಿಕ ಪ್ರಭಾವಗಳಿಂದ ಬಿಡಿಸಿಕೊಂಡು ತಮ್ಮದೇ ನೆಲದ ಅನುಭವ ಸಂವೇದನೆಗೆ ರೂಪಕಗಳನ್ನು  ಕಂಡುಕೊಳ್ಳಬಲ್ಲ ಸಾಮರ್ಥ್ಯ ಅವರಿಗಿದೆ.

ಅನ್ವೇಷಣೆಯ ಮನಸ್ಸು ಮಾತ್ರ ಕಲಾತ್ಮಕವಾಗಿ, ಸೃಜನಶೀಲವಾಗಿ ಚಿಂತಿಸಬಲ್ಲದು. ಆಗಷ್ಟೇ ಎಲ್ಲವೂ ಒಂದಾಗಿ, ಒಟ್ಟಾಗಿ ನೋಡಬಲ್ಲ ಅನನ್ಯ ನೋಟ ನಮ್ಮದಾಗಬಹುದು.

ಪ್ರದರ್ಶನ ಇಂದು ಆರಂಭ
ಹಿರಿಯ ಚಿತ್ರಕಲಾವಿದ ಕೆ.ಕೆ. ಮಕಾಳಿ ಮತ್ತು ಉದಯೋನ್ಮುಖ ಕಲಾವಿದ ರಮೇಶ್ ಚವಾಣ್ ಅವರ ಚಿತ್ರಕಲೆಗಳ ಪ್ರದರ್ಶನ ಇಂದಿನಿಂದ ಒಂದು ವಾರ ಕಾಲ (ಅ.8ರಿಂದ 14) ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಂಜೆ 5.30ಕ್ಕೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ. ಆರ್. ರಾಮಕೃಷ್ಣ, ಹಿರಿಯ ಚಿತ್ರಕಲಾವಿದ ಪ್ರೊ. ಹಿರೇಗೌಡರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT