ಜಮಖಂಡಿ: ಜಾನಪದ ಕಲೆಯಿಂದ ದೇಸಿ ಸಂಸ್ಕೃತಿ ಮತ್ತು ಪರಂಪರೆ ಗಟ್ಟಿಗೊಂಡಿದೆ. ಸಂಸ್ಕೃತಿಯ ವಾಹಿನಿ ಎನಿಸಿರುವ ಜಾನಪದ ಕಲೆಗೆ ಹೃದಯವನ್ನು ಅರಳಿಸುವ ಶಕ್ತಿ ಇದೆ ಎಂದು ಸಾಹಿತಿ ಸಿದ್ಧರಾಜ ಪೂಜಾರಿ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ತೇರದಾಳದ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ಹಾಗೂ ರಬಕವಿಯ ದಾನೇಶ್ವರಿ ಮಹಿಳಾ ಮಂಡಳ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿದ್ದು ದಿವಾಣ ಅತಿಥಿಯಾಗಿ ಪಾಲ್ಗೊಂಡು, ಜಾನಪದಕ್ಕೆ ಮಹಿಳೆಯರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಒಬ್ಬರು ಒಂದು ಕೊಟ್ಟರೆ ಇನ್ನೊಬ್ಬರು ಮತ್ತೊಂದು ಕೊಟ್ಟಿದ್ದಾರೆ ಎಂದರು. ವಿರಕ್ತ ಮಠದ ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಮಲ್ಲಪ್ಪ ಮಧುರಖಂಡಿ ಉಪಸ್ಥಿತರಿದ್ದರು. ವರ್ತಕ ಮಲ್ಲಿಕಾರ್ಜುನ ಸಾಬೋಜಿ ಅಧ್ಯಕ್ಷತೆ ವಹಿಸಿದ್ದರು. ಪಾರ್ವತಿ ಸಾಬೋಜಿ ಪ್ರಾರ್ಥನೆ ಗೀತೆ ಹಾಡಿದರು. ದಾನೇಶ್ವರಿ ಮಹಿಳಾ ಮಂಡಳ ಅಧ್ಯಕ್ಷೆ ಗಂಗಾಧರ ಬಿಲವಡಿ ಸ್ವಾಗತಿಸಿದರು. ಶಾರದಾ ಬಿಳಿಮೀಸಿ, ಶಿಕ್ಷಕ ಮ.ಕೃ. ಮೇಗಾಡಿ ನಿರೂಪಿಸಿದರು. ಪ್ರೇಮಾ ಉಮದಿ ವಂದಿಸಿದರು.
ಗೋಲಬಾಂವಿಯ ಜೈಕರ್ನಾಟಕ ಸಾಂಸ್ಕೃತಿಕ ಕಲಾ ತಂಡದ ಗಂಗಪ್ಪ ಗಿರಣಿಮನಿ ಹಾಗೂ ಸಂಗಡಿಗರಿಂದ ಡೊಳ್ಳಿನ ಕೈಪೆಟ್ಟು, ರಬಕವಿಯ ಪ್ರಭುಲಿಂಗ ಭಜನಾ ಮಂಡಳ, ರಾಂಪುರದ ಮಹಾಲಿಂಗೇಶ್ವರ ಭಜನಾ ಮಂಡಳ, ಬಾನುಲಿ ಕಲಾವಿದರಾದ ದುಂಡವ್ವ ಪೂಜೇರಿ, ಪಾರ್ವತಿ ಪೂಜೇರಿ ಅವರ ತತ್ವಪದಗಳು, ನಾವಲಗಿಯ ಸಂಗೀತಾ ನಾಯಕ, ಸುಶಾಂತ ರಗಶೆಟ್ಟಿ ಹಾಗೂ ತೇರದಾಳದ ಪ್ರಭುಲಿಂಗ ಭಜನಾ ಮಂಡಳ ಕಲಾವಿದರ ಹಾಡುಗಳು ಜನಮನ ತಣಿಸಿದವು.