ಸಾಗರ: ಬಿಜೆಪಿ ಬೆಂಬಲಿತ ಮೂರು ಗ್ರಾಮ ಪಂಚಾಯ್ತಿಯ ಸದಸ್ಯರು ಸೇರಿದಂತೆ ಶಿಕಾರಿಪುರ ತಾಲ್ಲೂಕು ಕಲ್ಮನೆ ಗ್ರಾಮ ಪಂಚಾಯ್ತಿಯ ಏಳು ಸದಸ್ಯರು ಬಿಜೆಪಿಗೆ ಸೇರಿದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ ಕೋರಿ ಸೋಮವಾರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ ಆರು ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ ನಾಲ್ಕು ಸದಸ್ಯರಿದ್ದಾರೆ. ಹಾಲಿ ಅಧ್ಯಕ್ಷ ಲೋಕೇಶ್ ಅವರು ಆಂತರಿಕ ಒಡಂಬಡಿಕೆಯಂತೆ ಈಗ್ಗೆ ಒಂದು ತಿಂಗಳ ಹಿಂದೆ ರಾಜಿನಾಮೆ ನೀಡಬೇಕಿದ್ದು, ಅವರು ಹಾಗೆ ಮಾಡದೇ ಇರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಒಟ್ಟಿಗೆ ಸೇರಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕಾರಿಪುರ ತಾಲ್ಲೂಕು ಕಾಂಗ್ರೆಸ್ ಮುಖಂಡ ಮಲ್ಲೇಶಪ್ಪ, ಮುಖ್ಯಮಂತ್ರಿ ತವರು ಕ್ಷೇತ್ರದಲ್ಲಿ ಪಂಚಾಯ್ತಿ ಪ್ರತಿನಿಧಿಗಳು ಹಾಗೂ ಮುಖಂಡರು ಆಡಿದ ಮಾತಿನಂತೆ ನಡೆದುಕೊಳ್ಳದ ಕಾರಣ ಅನೇಕ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತೀ.ನಾ. ಶ್ರೀನಿವಾಸ್, ಶಿಕಾರಿಪುರದ ಕೆ. ಬಸವರಾಜಪ್, ಸತೀಶ್ಕುಮಾರ್, ರೇವಪ್ಪ, ರಾಮಪ್ಪ, ಅಂಗಡಿ ಸಿದ್ದಪ್ಪ, ಹುಚ್ಚರಾಯಪ್ಪ, ಗಂಗಮ್ಮ, ಶೈಲಮ್ಮ ಇನ್ನಿತರರು ಹಾಜರಿದ್ದರು.