ಜಮಖಂಡಿ: ಸಾಹಿತ್ಯ ಲೋಕದಲ್ಲಿ `ಸತ್ಯಕಾಮ~ ಎಂದೇ ಹೆಸರಾದ ಸಾಹಿತಿ, ಆಧ್ಯಾತ್ಮಿಕ ಚಿಂತನಕಾರ ಅನಂತ ಕೃಷ್ಣಾಚಾರ್ಯ ಶಹಪೂರ ಅವರ 13ನೇ ಆರಾಧನೆ ಇದೇ 20ರಂದು ಮುಂಜಾನೆ 10 ಗಂಟೆಗೆ ತಾಲ್ಲೂಕಿನ ಕಲ್ಲಹಳ್ಳಿಯ ತೋಟದ ಮನೆ `ಸುಮ್ಮನೆ~ಯಲ್ಲಿ ಜರುಗಲಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟಕ ಆರ್.ಪಿ. ನ್ಯಾಮಗೌಡ, ಸತ್ಯಕಾಮ ಪ್ರತಿಷ್ಠಾನದ ಆಶ್ರಯದಲ್ಲಿ ಆರಾಧನೆ ಕಾರ್ಯಕ್ರಮ ಆಯೋಜಿಸಿದ್ದು, ಆರಾಧನೆ ಅಂಗವಾಗಿ ಮುಂಜಾನೆ ನುಡಿ ಸಮಯ, ಮಧ್ಯಾಹ್ನ ಕವಿ ಸಮಯ ಹಾಗೂ ಸಂಜೆ ದೇವ ಸಮಯ ಎಂಬ ಮೂರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.
ಮುಂಜಾನೆ ಕಾರ್ಯಕ್ರಮದಲ್ಲಿ ಕಲಾವಿದ ಏಣಗಿ ಬಾಳಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ, ಚಲನಚಿತ್ರ ನಿರ್ದೇಶಕ ಕೆ.ಸುಚೇಂದ್ರ ಪ್ರಸಾದ, ನಟ ಬಿ.ಸುರೇಶ, ವಿಮರ್ಶಕ ಚಂದ್ರಶೇಖರ ನಂಗಲಿ ಪಾಲ್ಗೊಳ್ಳುವರು.
ವಿಮರ್ಶಕಿ ಹೇಮಾ ಪಟ್ಟಣಶೆಟ್ಟಿ, ಕವಿ ಆನಂದ ಝುಂಜರವಾಡ, ಕವಿಗಳಾದ ಡಾ.ಎಲ್.ಎನ್. ಮುಕುಂದರಾಜು, ಸುಬ್ಬು ಹೊಲೆಯಾರ್, ಡಾ. ಮಮತಾ ಸಾಗರ, ಆರ್.ಜಿ. ಹಳ್ಳಿ ನಾಗರಾಜ, ಪ್ರೊ.ಟಿ. ಪದ್ಮಾ, ಕಸ್ತೂರಿ ಬಾಯಿರಿ ಕವಿ ಸಮಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಬರೆದ ಮುಕುಂದೂರು ಸ್ವಾಮಿಗಳ ಜೀವನ ಚರಿತ್ರೆ ಆಧಾರಿತ `ಯೇಗ್ದಾಗೆಲ್ಲಾ ಐತೆ~ ಎಂಬ ನಾಟಕವನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ನಿರ್ದೇಶನದಲ್ಲಿ ಬೆಂಗಳೂರಿನ ಕಲಾವಿದರು ಪ್ರದರ್ಶಿಸಲಿದ್ದಾರೆ. ಇದೇ 19 ರ ರಾತ್ರಿ 7 ಗಂಟೆಗೆ ಕೆ. ಸುಚೇಂದ್ರ ಪ್ರಸಾದ ನಿರ್ದೇಶನದ `ಪ್ರಪಾತ~ ಚಿತ್ರಪ್ರದರ್ಶನ ಏರ್ಪಡಿಸಲಾಗುವುದು ಎಂದೂ ಅವರು ತಿಳಿಸಿದರು.